ಖಟಕಚಿಂಚೋಳಿ: ಸಮೀಪದ ಚಳಕಾಪುರ ಗ್ರಾಮದ ರೈತ ವೆಂಕಟರಾವ್ ಮಾಲಿಪಾಟೀಲ ಅವರು ಕಬ್ಬಿನ ಜೊತೆ ಮಿಶ್ರ ಬೆಳೆಗಳನ್ನು ಬೆಳೆಯುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ.
ತಮ್ಮ ಒಂದು ಎಕರೆ ಪ್ರದೇಶದಲ್ಲಿ ಐದು ಅಡಿ ಅಂತರದಲ್ಲಿ ಕಬ್ಬು ಬೆಳೆದಿದ್ದಾರೆ. ಎರಡು ಸಾಲುಗಳ ನಡುವೆ ಕಾಬೂಲಿ ಕಡಲೆ ಬೆಳೆದಿದ್ದಾರೆ. ಸುಮಾರು 65 ದಿನಗಳ ನಂತರ ಕಟಾವಿಗೆ ಬರುವ ಕಡಲೆ ಬೆಳೆ ಸದ್ಯ ಹೂಗಳಿಂದ ಕಂಗೊಳಿಸುತ್ತಿದೆ. ಇನ್ನುಳಿದ ಅರ್ಧ ಎಕರೆಯಲ್ಲಿ ಗುಲಾಬಿ ಹೂ ನೆಡಲಾಗಿದೆ. ಅವುಗಳ ಸಾಲಿನ ಮಧ್ಯದಲ್ಲಿ ಪಾಲಕ, ಮೆಂತೆ ಸೇರಿದಂತೆ ಇನ್ನಿತರ ತರಕಾರಿ ಬೆಳೆಯಲಾಗಿದೆ’ ಎನ್ನುತ್ತಾರೆ ರೈತ.
‘ಭೂಮಿ ಹದ, ಬಿತ್ತನೆ ಬೀಜ, ರಸಗೊಬ್ಬರ, ಔಷಧ ಸಿಂಪಡಣೆ ಸೇರಿದಂತೆ ಇನ್ನಿತರ ಖರ್ಚು ಸೇರಿ ₹30 ಸಾವಿರ ಖರ್ಚಾಗಿದೆ. ಈಗಾಗಲೇ ಖರ್ಚಾಗಿರುವ ಅರ್ಧದಷ್ಟು ಹಣ ತರಕಾರಿ ಹಾಗೂ ಗುಲಾಬಿ ಮಾರಾಟದಿಂದ ಬಂದಿದೆ’ ಎಂದು ರೈತ ಪಾಟೀಲ ತಿಳಿಸುತ್ತಾರೆ.
‘ವಾರದಲ್ಲಿ ಎರಡು ಬಾರಿ ಗುಲಾಬಿ ಹೂ ಹಾಗೂ ತರಕಾರಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತಿದ್ದೇನೆ. ಗುಲಾಬಿ ಹೂ ಪ್ರತಿ ಕೆಜಿಗೆ ₹100 ರಂತೆ ಮಾರಾಟ ಆಗುತ್ತಿವೆ. ಅಲ್ಲದೇ ತರಕಾರಿ ಮಾರಾಟದಿಂದಲೂ ಆದಾಯ ದೊರೆಯುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಕಾಬೂಲಿ ಕಡಲೆ ಹಾಗೂ ಕಬ್ಬು ಬೆಳೆಯಿಂದ ಇನ್ನೂ ಹೆಚ್ಚಿನ ಲಾಭ ದೊರೆಯಲಿದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ.
‘ಮುಖ್ಯವಾಗಿ ಮಿಶ್ರ ಬೆಳೆ ಬೆಳೆಯುವುದರಿಂದ ಕಳೆ ತೆಗೆಯುವ ಖರ್ಚು ಬರುವುದಿಲ್ಲ ಹಾಗೂ ಹನಿ ನೀರಾವರಿ ಬಳಕೆಯಿಂದ ರಸಗೊಬ್ಬರ ಹಾಕುವ ಕಾರ್ಮಿಕರ ಸಮಸ್ಯೆ ತಪ್ಪುತ್ತದೆ’ ಎಂಬುವುದು ಅವರ ಮನದಾಳದ ಮಾತಾಗಿದೆ.
‘ರೈತರು ಒಂದು ಬೆಳೆಯನ್ನು ನಂಬಿ ವ್ಯವಸಾಯ ಮಾಡಬಾರದು. ನಾಲ್ಕು ಬೆಳೆ ಇಟ್ಟರೆ ಒಂದಲ್ಲಾ ಒಂದಕ್ಕೆ ಲಾಭದಾಯಕ ಬೆಲೆ ಸಿಗುತ್ತದೆ. ಇರುವ ಜಮೀನನ್ನು ವೈಜ್ಞಾನಿಕವಾಗಿ ವಿಂಗಡಿಸಿ ಬೆಳೆ ಬೆಳೆದಲ್ಲಿ ನಷ್ಟದ ಪ್ರಶ್ನೆ ಇಲ್ಲ’ ಎಂಬುದು ಅವರ ಅಭಿಪ್ರಾಯ.
ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಕಷ್ಟಪಟ್ಟು ಕೆಲಸ ಮಾಡಿದರೆ ಯಶಸ್ಸು ಖಚಿತ ದೊರಕುತ್ತದೆ.ವೆಂಕಟರಾವ್ ಮಾಲಿಪಾಟೀಲ, ರೈತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.