ಬೀದರ್: ಕಳೆದ ಸಾಲಿನಲ್ಲಿ ನಾರಂಜಾ ಸಹಕಾರ ಸಕ್ಕರೆ ಕಾಖಾರ್ನೆಗೆ ಕಬ್ಬು ಪೂರೈಸಿದ ರೈತರಿಗೆ ಬಾಕಿ ಹಣ ಪಾವತಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ನಗರದ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ಇರುವ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರ ಮನೆ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ನಿಯಮಾನುಸಾರ ಕಬ್ಬು ಸರಬರಾಜು ಮಾಡಿದ 15 ದಿನಗಳ ಒಳಗೆ ಹಣ ಪಾವತಿಸಬೇಕು. ಆದರೆ, ಕಾರ್ಖಾನೆಗೆ ಕಬ್ಬು ಪೂರೈಸಿ ಎಂಟು ತಿಂಗಳಾದರೂ ಹಣ ಸಂದಾಯ ಮಾಡಿಲ್ಲ ಎಂದು ದೂರಿದರು.
ಮುಂಗಾರು ಹಂಗಾಮು ಆರಂಭವಾಗಿದೆ. ರೈತರಿಗೆ ಬೀಜ, ಗೊಬ್ಬರ ಖರೀದಿ, ಉಳುಮೆ, ಮಕ್ಕಳ ಶಾಲಾ ಶುಲ್ಕ, ಕುಟುಂಬ ನಿರ್ವಹಣೆಗೆ ಹಣದ ಅವಶ್ಯಕತೆ ಇದೆ. ರೈತರು ಸಾಲ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದರು.
ಸ್ಥಳಕ್ಕೆ ಬಂದ ಉಮಾಕಾಂತ ನಾಗಮಾರಪಳ್ಳಿ ಅವರು ಮನವಿ ಪತ್ರ ಸ್ವೀಕರಿಸಿದರು.
‘ತಿಂಗಳಾಂತ್ಯದೊಳಗೆ ಪ್ರತಿ ಟನ್ಗೆ ₹ 1,500 ರಂತೆ ಕಬ್ಬು ಹಣ ಪಾವತಿಸಲಾಗುವುದು. ಉಳಿದ ₹ 400 ಅನ್ನು ಸಕ್ಕರೆ ಮಾರಾಟದ ನಂತರ ಸಂದಾಯ ಮಾಡಲಾಗುವುದು ಎಂದು ಉಮಾಕಾಂತ ನಾಗಮಾರಪಳ್ಳಿ ಭರವಸೆ ನೀಡಿದ್ದಾರೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ವೈಜಿನಾಥ ನೌಬಾದೆ ತಿಳಿಸಿದ್ದಾರೆ.