ಬೀದರ್: ಮಾರ್ಚ್ನಲ್ಲಿ ಸ್ಥಗಿತಗೊಂಡಿರುವ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇದುವರೆಗೆ ಆರಂಭಗೊಂಡಿಲ್ಲ. ಇದರಿಂದಾಗಿ ಅನೇಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರದ ಅನೇಕ ಸವಲತ್ತುಗಳಿಂದ ವಂಚಿತರಾಗುತ್ತಿದ್ಧಾರೆ.
ಹಿಂದಿನ ಬಿಜೆಪಿ ಸರ್ಕಾರವು ಕೆಲವು ತಾಂತ್ರಿಕ ಕಾರಣಗಳನ್ನು ಕೊಟ್ಟು ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ನಿಲ್ಲಿಸಿತು. ಈಗ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳಾಗಿದೆ. ಹೀಗಿದ್ದರೂ ಸಮಸ್ಯೆ ಬಗೆಹರಿಸಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿಲ್ಲ.
ರಾಜ್ಯ ಸರ್ಕಾರವು ‘ಗ್ಯಾರಂಟಿ’ ಯೋಜನೆಗಳನ್ನು ಜಾರಿಗೆ ತಂದ ನಂತರ ಕಾರ್ಡುಗಳನ್ನು ಹೊಂದಿಲ್ಲದವರು ಕೂಡ ಅರ್ಜಿ ಸಲ್ಲಿಸಿ ಹೊಸದಾಗಿ ಮಾಡಿಸಿಕೊಳ್ಳಲು ಮುಂದಾಗಿದ್ಧಾರೆ. ಆದರೆ, ಅರ್ಜಿ ಸಲ್ಲಿಕೆಯೇ ಸ್ಥಗಿತಗೊಂಡಿರುವುದರಿಂದ ಅವರೆಲ್ಲ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಂಪ್ಯೂಟರ್ ಕೇಂದ್ರಗಳಿಗೆ ಸುತ್ತಾಡಿ ಸುಸ್ತಾಗುತ್ತಿದ್ದಾರೆ. ಹೆಚ್ಚಿನವರಿಗೆ ಹೊಸ ಅರ್ಜಿ ಸ್ವೀಕರಿಸುತ್ತಿಲ್ಲ ಎಂಬ ವಿಷಯವೇ ಗೊತ್ತಿಲ್ಲ. ಮಧ್ಯವರ್ತಿಗಳಿಗೆ ಹಣ ಕೊಟ್ಟು ಪಡಿತರ ಪಡೆಯದೆ ಸಮಸ್ಯೆ ಎದುರಿಸುತ್ತಿದ್ದಾರೆ.
ಗ್ಯಾರಂಟಿ ಸೇರಿದಂತೆ ಸರ್ಕಾರದ ಇತರೆ ಯೋಜನೆಗಳ ಸದುಪಯೋಗ ಪಡೆಯಬೇಕಾದರೆ ಪಡಿತರ ಹೊಂದಿರಬೇಕಾದದ್ದು ಬಹಳ ಅತ್ಯಗತ್ಯ. ಆದರೆ, ಅರ್ಜಿಗಳನ್ನೇ ಸ್ವೀಕರಿಸದ ಕಾರಣ ಜನ ದಿಕ್ಕು ತೋಚದೆ ಸುಮ್ಮನಾಗಿದ್ದಾರೆ. ತಮ್ಮೆದುರೇ ಹಲವರು ಸರ್ಕಾರದ ನಗದು ಯೋಜನೆಗಳ ಲಾಭ ಪಡೆಯುತ್ತಿರುವುದನ್ನು ನೋಡಿ ಒಳಗೊಳಗೆ ಸಂಕಟ ಅನುಭವಿಸುತ್ತಿದ್ದಾರೆ.
‘ನಾನು ಹೋದ ವರ್ಷ ಆದ್ಯತಾ (ಬಿಪಿಎಲ್) ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದೆ. ಏನೇನೋ ಕಾರಣಗಳನ್ನು ಕೊಟ್ಟು ಹೊಸದಾಗಿ ಅರ್ಜಿ ಸಲ್ಲಿಸಬೇಕೆಂದು ತಿಳಿಸಿದ್ದರು. ಅಷ್ಟರಲ್ಲಿ ಅರ್ಜಿಗಳನ್ನು ಸದ್ಯ ಸ್ವೀಕರಿಸುತ್ತಿಲ್ಲ ಎಂದು ಹೇಳಿದ್ದರು. ಸುಮಾರು ಏಳೆಂಟು ತಿಂಗಳಾದರೂ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ. ಇದುವರೆಗೆ ಕಾರ್ಡ್ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಆಸ್ಪತ್ರೆ, ಶಾಲೆಗಳಿಗೆ ಹೆಚ್ಚಿನ ಹಣ ಪಾವತಿಸುವಂತಾಗಿದೆ. ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ನಮ್ಮಂತಹ ಬಡವರಿಗ ಸರ್ಕಾರ ಏನಾದರೂ ವ್ಯವಸ್ಥೆ ಮಾಡಬೇಕು’ ಎಂದು ಮೈಲೂರಿನ ನಿವಾಸಿ ರಾಧಾ ಹೇಳಿದರು.
‘ಸರ್ಕಾರ ಚುನಾವಣೆಗೂ ಮುನ್ನ ಅನೇಕ ಗ್ಯಾರಂಟಿಗಳನ್ನು ಘೋಷಿಸಿದೆ. ಅದನ್ನೀಗ ಈಡೇರಿಸಲೇಬೇಕಾದ ಪರಿಸ್ಥಿತಿ ಬಂದಿದೆ. ಸರ್ಕಾರದ ಬೊಕ್ಕಸ ಖಾಲಿಯಾಗುತ್ತಿದೆ. ಹೊಸ ಅರ್ಜಿಗಳು ಬಂದರೆ ಮತ್ತಷ್ಟು ಹಣ ಬೇಕಾಗುತ್ತದೆ. ಹೊಂದಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದರಿತು ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ’ ಎಂದು ಮಂಗಲಪೇಟ್ ನಿವಾಸಿ ರಾಜು ಆರೋಪಿಸಿದರು.
ಈ ಸಂಬಂಧ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಸುರೇಖಾ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ಈ ಹಿಂದೆ ಅರ್ಜಿ ಸಲ್ಲಿಸಿದವರ ದಾಖಲೆಗಳನ್ನು ಪರಿಶೀಲಿಸಿ ವಿಲೇವಾರಿ ಮಾಡುವಂತೆ ಸರ್ಕಾರದಿಂದ ಸೂಚನೆ ಬಂದಿದೆ. ಒಂದೇ ಕುಟುಂಬದಿಂದ ಪ್ರತ್ಯೇಕವಾದವರು ಇದರಲ್ಲಿ ಹೆಚ್ಚಿನವರಿದ್ದಾರೆ ಎಂದು ತಿಳಿಸಿದರು.
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸದ್ಯ ನಡೆಯುತ್ತಿಲ್ಲ. ಆದರೆ, ಮೆಡಿಕಲ್ ಎಮರ್ಜೆನ್ಸಿ ಇದ್ದರೆ ಅರ್ಜಿ ಸಲ್ಲಿಸಬಹುದು. ಅರ್ಜಿ ಕೊಟ್ಟರೆ ಅದನ್ನು ಪರಿಶೀಲಿಸಿ ಮಾಡಿಕೊಡಲಾಗುತ್ತದೆ. ತಿದ್ದುಪಡಿ, ಹೊಸ ಹೆಸರು ಸೇರ್ಪಡೆ ಕೆಲಸ ಎಂದಿನಂತೆ ನಡೆಯುತ್ತಿದೆ ಎಂದು ಹೇಳಿದರು.
ಪೂರಕ ಮಾಹಿತಿ: ಗುಂಡು ಅತಿವಾಳ, ವೀರೇಶ್ ಎನ್. ಮಠಪತಿ, ಬಸವರಾಜ ಪ್ರಭಾ, ಮನ್ಮಥಪ್ಪ ಸ್ವಾಮಿ
ಬಾಕಿ ಇರುವ 10 ಸಾವಿರ ಅರ್ಜಿಗಳನ್ನು ಪರಿಶೀಲಿಸಿ ವಿಲೇವಾರಿಗೆ ಸೂಚನೆ ಬಂದಿದೆ. ಶೀಘ್ರ ಕೆಲಸ ಆರಂಭವಾಗಲಿದೆ.–ಸುರೇಖಾ ಉಪನಿರ್ದೇಶಕಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.