ಚಿಟಗುಪ್ಪ: ‘ಬದುಕಿನಲ್ಲಿ ನಿಶ್ಚಿತ ಗುರಿ ಇಟ್ಟುಕೊಂಡು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ’ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಿವಕುಮಾರ ಕುಂಬಾರ ಅಭಿಪ್ರಾಯಪಟ್ಟರು.
ತಾಲ್ಲೂಕಿನ ನಿರ್ಣಾದಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿ,‘ಮಕ್ಕಳಲ್ಲಿ ಅಡಗಿದ ಸುಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ ಬೆಳೆಸುವುದಕ್ಕಾಗಿ ಸರ್ಕಾರ ರೂಪಿಸಿದ ಈ ಯೋಜನೆ ಸದ್ಬಳಕೆ ಆಗುವಂತೆ ಶಿಕ್ಷಕರು ನೋಡಿಕೊಳ್ಳಬೇಕು’ ಎಂದರು.
ಸಾಹಿತಿ ವೀರೇಶ ಮಠಪತಿ ವಿಶೇಷ ಉಪನ್ಯಾಸ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಜುಕುಮಾರ ಕಿರಣ ಮಾತನಾಡಿ,‘ವಿದ್ಯಾರ್ಥಿ ಜೀವನದಲ್ಲಿ ಕಲಿತ ಶಿಕ್ಷಣ ಹಾಗೂ ಸಂಸ್ಕಾರ ಬದುಕಿನುದ್ದಕ್ಕೂ ಜತೆಯಾಗಿ ಇರಬೇಕು. ಉನ್ನತ ಸ್ಥಾನಕ್ಕೆ ಹೋದಾಗ, ನಿಮ್ಮ ಹಾಗೆ ಕಲಿಯಲು ಹಂಬಲ ಇರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ. ಅವರ ಬದುಕನ್ನು ಮುನ್ನಡೆಸಲು ಮುಂದಾಗಿ’ ಎಂದು ಹೇಳಿದರು.
ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ರಾಮಕೃಷ್ಣ, ಅರ್ಜುನ ಶರ್ಮಾ, ವೈಜಿನಾಥ, ಮಲ್ಲಿಕಾರ್ಜುನ ಸಿದ್ದಪನೋರ್, ಪ್ರಕಾಶ ಹಾರವೇಕರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ, ಸದಸ್ಯರು ಪಾಲ್ಗೊಂಡಿದ್ದರು.