ಬೀದರ್: ‘ಪ್ರವಾದಿ ಮುಹಮ್ಮದ್ ದಿವ್ಯಜ್ಞಾನದ ಹೆಸರು. ಅವರು ಸತ್ಯಧರ್ಮಕ್ಕೆ ಸಾಕ್ಷಿಯಾಗಿದ್ದಾರೆ’ ಎಂದು ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಅಬ್ದುಲ್ ಸತ್ತಾರ್ ಬಣ್ಣಿಸಿದರು.
ನಗರದ ನಿಜಾಮ್ ಫಂಕ್ಷನ್ ಪ್ಯಾಲೇಸ್ನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಪ್ರವಾದಿ ಮುಹಮ್ಮದ್ ಅವರ ಜೀವನ ಹಾಗೂ ಸಂದೇಶ ಕುರಿತು ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸಜ್ಜನರಿಗೆ ಪ್ರವಾದಿ ಮುಹಮ್ಮದ್ ಕರುಣಾಮಯಿಯಾಗಿದ್ದಾರೆ. ದುಷ್ಟರಿಗೆ ಕಠಿಣ ಶಿಕ್ಷೆ ಕೊಡುವ ದೇವನಾಗಿದ್ದಾನೆ. ಅವನ ತತ್ವ ಆದರ್ಶಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದರು ತಿಳಿಸಿದರು.
ಕವಿಗೋಷ್ಠಿಯಲ್ಲಿ ರಘುಶಂಖ ಭಾತಂಬ್ರ ’ಇಸ್ಲಾಮ್ ಎಂದರೇನು?, ಸಂಜೀವಕುಮಾರ ಅತಿವಾಳೆ ’ಮಾನವ ಕುಲದ ಮಾರ್ಗದರ್ಶಕರು. ಕಸ್ತೂರಿ ಪಟಪಳ್ಳಿ ‘ಮುಹಮ್ಮದ್ ಪೈಗಂಬರ್’, ವಿಶ್ವನಾಥ ಮುಕ್ತಾ ‘ಪ್ರಕಾಶಿತ ಜ್ಯೋತಿ’, ನಾಗಶೆಟ್ಟಿ ಪಾಟೀಲ ಗಾದಗಿ ‘ನೈತಿಕತೆಯ ಬೆಳಕು-ಪ್ರವಾದಿ ಮುಹಮ್ಮದ’, ರೇಣುಕಾ ಎನ್.ಬಿ ‘ಭೂಮಿಯ ಬೆಳಕು’ ಶೀರ್ಷಿಕೆಯಡಿ ಕವನ ಓದಿದರು. ಶಾಮರಾವ್ ನೆಲವಾಡೆ, ದೇವೇಂದ್ರ ಕಮಲ್ ಕನ್ನಡ ಹಾಗೂ ಹಿಂದಿಯಲ್ಲಿ ಕವನ ವಾಚಿಸಿದರು.
ಉರ್ದು ಕವಿಗಳಾದ ಮುನಾವರ್ ಅಲಿ ಷಾಹಿದ್, ಲತೀಫ್ ಖಾಲಿಷ್, ಹಾಮೇದ್ ಸಲೀಂ ಹಾಮೇದ್, ಖಾಜಿ ಸೈಯದ್ ಇದ್ರೀಸ್ ಅಲಿ ಸಾರ್ಹೆ ದೇಗಲೂರ, ಸೈಯದ್ ಖಾಸೀಮ್ ಸಾಜೀದ್, ಕಮಾಲುದ್ದಿನ್, ಶಮೀಮ್, ಸೈಯ್ಯದ್ ಜಮೀಲ್ ಅಹ್ಮದ್ ಹಾಷ್ಮಿ ಕವನ ವಾಚನ ಮಾಡಿದರು.
ರಫೀಕ್ ಅಹ್ಮದ್ ಕುರ್ಆನ್ ಪಠಣ ಮಾಡಿದರು. ಸೈಯದ್ ಅಸ್ಲಮ್ ಖಾದ್ರಿ ನಿರೂಪಿಸಿದರು. ಮಹಮ್ಮದ್ ಝಪರುಲ್ಲಾ ಖಾನ್ ವಂದಿಸಿದರು.