ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲನಗರ | ಚರಂಡಿ ಸ್ವಚ್ಛಗೊಳಿಸಿ: ಸಾರ್ವಜನಿಕರ ಆಗ್ರಹ

ಗಣಪತಿ ಕುರನ್ನಳೆ
Published 30 ಏಪ್ರಿಲ್ 2024, 5:39 IST
Last Updated 30 ಏಪ್ರಿಲ್ 2024, 5:39 IST
ಅಕ್ಷರ ಗಾತ್ರ

ಕಮಲನಗರ: ಪಟ್ಟಣದ ವಿವಿಧ ವಾರ್ಡ್‌ಗಳು ಹಾಗೂ ಪ್ರಮುಖ ವೃತ್ತಗಳಲ್ಲಿನ ಚರಂಡಿಗಳು ಕಟ್ಟಿಕೊಂಡು ದುರ್ನಾತ ಬೀರುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದ್ದು, ಚರಂಡಿಗಳನ್ನು ಸ್ವಚ್ಛಗೊಳಿಸಬೇಕು ಎಂದು ಪಟ್ಟಣದ ನಿವಾಸಿಗಳು ಆಗ್ರಹಿಸಿದ್ದಾರೆ.

ಪಟ್ಟಣದ ಅಲ್ಲಮಪ್ರಭು ವೃತ್ತದಲ್ಲಿನ ಶೌಚಾಲಯದಿಂದ ಬಾಲೂರ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯವರೆಗೆ, ಹೀರೆಮಠ ಶಾಖಾಮಠದಿಂದ ಅಂಚೆ ಕಚೇರಿವರೆಗೆ ಸೇರಿದಂತೆ ಇನ್ನೂ ಹಲವು ವಾರ್ಡ್‌ಗಳಲ್ಲಿ ಚರಂಡಿಗಳು ಕಟ್ಟಿಕೊಂಡಿವೆ. ಇನ್ನು ಹಲವೆಡೆ ಚರಂಡಿಗಳು ತೆರೆದುಕೊಂಡಿದ್ದು, ಚಾವಣಿಗಳನ್ನು ಹಾಕಿಲ್ಲ. ಇವು ಬೈಕ್‌ ಸವಾರರಿಗೆ ಮಾರಣಾಂತಿಕವಾಗಿವೆ. ಚರಂಡಿಗಳು ದೊಡ್ಡವಾಗಿರುವುದರಿಂದ ಬೈಕ್‌ ಸವಾರರು ಆಯತಪ್ಪಿ ಬಿದ್ದರೆ, ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿಯಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಲಖಣಗಾಂವ, ಭಾತಂಬ್ರಾ, ಭಾಲ್ಕಿ ಪಟ್ಟಣಗಳಿಗೆ ತೆರಳಲು ಪ್ರಯಾಣಿಕರು ಪಟ್ಟಣದ ಅಲ್ಲಮಪ್ರಭು ವೃತ್ತದಲ್ಲಿರುವ ಬಸ್ ತಂಗುದಾಣದಲ್ಲಿ ಬಸ್‌ಗಳಿಗಾಗಿ ಕಾಯುತ್ತಾರೆ. ಆದರೆ ಅಲ್ಲಿರುವ ಚರಂಡಿಗಳಿಂದ ಬರುವ ದುರ್ನಾತದಿಂದಾಗಿ ಕಾಯುವಿಕೆಯು ಅಸಹನೀಯವಾಗಿದೆ. ಜತೆಗೆ ಸೊಳ್ಳೆಗಳ ಉತ್ಪತ್ತಿ ತಾಣವಾಗಿರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿಯೂ ಎದುರಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಮಹಿಳಾ ಪ್ರಯಾಣಿಕರು ಆರೋಪಿಸಿದ್ದಾರೆ.

ಸಮುದಾಯ ಆರೋಗ್ಯ ಕೇಂದ್ರ ಎದುರಿನ ಚರಂಡಿಯಲ್ಲಿ ಸುತ್ತಲಿನ ವ್ಯಾಪಾರಸ್ಥರು ತ್ಯಾಜ್ಯವನ್ನು ಸುರಿಯುತ್ತಿದ್ದಾರೆ. ಜತೆಗೆ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಯೂ ಕೂಡ ಸೂಕ್ತವಾಗಿಲ್ಲ. ಸುತ್ತಲಿನ ನಿವಾಸಿಗಳ ಬದುಕು ದುರ್ನಾತದಿಂದಾಗಿ ಅಸಹನೀಯವಾಗಿದೆ. 

ಸಾರ್ವಜನಿಕ ಶೌಚಾಲಯಗಳಿಂದ ಬಾಲೂರ ರಸ್ತೆಯ ಎರಡು ಬದಿ ಚರಂಡಿ ನಾಲೆಗಳು ಆಳವಾಗಿವೆ. ಹೀಗಾಗಿ ಅದರಲ್ಲಿನ ಹೂಳು ತೆಗೆಯಲು ಟೆಂಡರ್ ಕರೆಯಬೇಕಾಗುತ್ತದೆ. ಶೀಘ್ರ ಚರಂಡಿ ಸ್ವಚ್ಛಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಪಿಡಿಒ ರಾಜಕುಮಾರ ತಂಬಾಕೆ ಹೇಳಿದ್ದಾರೆ.

ಚರಂಡಿಗಳ ಸ್ವಚ್ಛತೆ ಕುರಿತು ಕೇಳಿದಾಗಲೊಮ್ಮೆ ಸಮಜಾಯಿಷಿ ನೀಡುತ್ತಾರೆಯೇ ಹೊರತು, ಕ್ರಮಕೈಗೊಳ್ಳುವುದಿಲ್ಲ. ಇದು ಸರಿಯಾದ ಕ್ರಮವಲ್ಲ. ಇದು ಹೀಗೆಯೇ ಮುಂದುವರಿದರೆ, ಮುಂಬರುವ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ದಸಂಸ ತಾಲ್ಲೂಕು ಘಟಕದ ಅಧ್ಯಕ್ಷ ಗೋವಿಂದರಾವ ತಾಂದಳೆ ಎಚ್ಚರಿಕೆ ನೀಡಿದ್ದಾರೆ.

ಫೋಟೋ ಕ್ಯಾಪ್ಷನ್: ಕಮಲನಗರ ಪಟ್ಟಣದ ಅಲ್ಲಮಪ್ರಭು ವೃತ್ತದಲ್ಲಿ ಹೊರಸೂಸುತ್ತಿರುವ ಗಬ್ಬು ವಾಸನೆಯ ನಾಲಿಯ ಚೀಚ್ರ.ತೊರಿಸುತ್ತಿರುವುದು.
ಫೋಟೋ ಕ್ಯಾಪ್ಷನ್: ಕಮಲನಗರ ಪಟ್ಟಣದ ಅಲ್ಲಮಪ್ರಭು ವೃತ್ತದಲ್ಲಿ ಹೊರಸೂಸುತ್ತಿರುವ ಗಬ್ಬು ವಾಸನೆಯ ನಾಲಿಯ ಚೀಚ್ರ.ತೊರಿಸುತ್ತಿರುವುದು.
ಹೋಟೆಲ್‌, ಕಿರಾಣಿ ಅಂಗಡಿಗಳ ತ್ಯಾಜ್ಯಗಳಿಂದಾಗಿ ಕೊಳಚೆ ನೀರು ಕಟ್ಟಿಕೊಳ್ಳುವುದರಿಂದ ದುರ್ನಾತ ಬೀರುತ್ತದೆ. ಕೊಳಚೆ ನೀರು ಹರಿದುಹೋಗುವಂತೆ ಸೂಕ್ತ ಕ್ರಮಕೈಗೊಳ್ಳಲು ಪಿಡಿಒ ಅವರಿಗೆ ಶೀಘ್ರ ಸೂಚನೆ ನೀಡಲಾಗುವುದು
- ಶಿವಕುಮಾರ ಘಾಟೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT