ಬೀದರ್: ನಗರದ ವಿವೇಕಾನಂದ ಕಾಲೊನಿಯಲ್ಲಿ ಭಾನುವಾರ ಗಾನಯೋಗಿ ಪಂಚಾಕ್ಷರಿ ಗವಾಯಿ ಸೇವಾ ಸಂಘದಿಂದ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ 110ನೇ ಜಯಂತಿ ಆಚರಿಸಲಾಯಿತು.
ಸಂಘದ ಗೌರವ ಅಧ್ಯಕ್ಷ ಪ್ರೊ.ಎಸ್.ವಿ.ಕಲ್ಮಠ ಮಾತನಾಡಿ, ಅಂಧತ್ವವನ್ನು ಮೆಟ್ಟಿನಿಂತು, ಅಸಾಧ್ಯವಾದುದನ್ನು ಸಾಧ್ಯವಾಗಿಸಿದವರು ಪುಟ್ಟರಾಜ ಕವಿ ಗವಾಯಿಗಳು. ಅಂಧರು, ಅನಾಥರು, ದೀನ ದಲಿತರಿಗೆ ಸಂಗೀತ ವಿದ್ಯೆ ಕಲಿಸಿ ಅವರಿಗೆ ಸ್ವತಂತ್ರವಾಗಿ ಬದುಕಲು ಕಲಿಸಿಕೊಟ್ಟ ಮಹಾಪುರುಷರು ಎಂದು ವರ್ಣಿಸಿದರು.
ಗವಾಯಿಗಳ ವ್ಯಕ್ತಿತ್ವ ಅಸಾಧಾರಣವಾದುದು. ಅವರು ಹಿಂದಿ ಭಾಷೆಯಲ್ಲಿ ರಚಿಸಿದ ಬಸವ ಪುರಾಣಕ್ಕೆ ಮಾಜಿ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಪ್ರಭಾವಿತರಾಗಿದ್ದರು. ಗವಾಯಿಗಳನ್ನು ನವದೆಹಲಿಗೆ ಕರೆಸಿ ಸನ್ಮಾನಿಸಿದ್ದರು ಎಂದು ನೆನಪಿಸಿದರು.
ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾಳೆ, ಕಾರ್ಯದರ್ಶಿ ದಾನಿ ಬಾಬುರಾವ, ಬಿ.ಎಸ್.ಬಿರಾದಾರ, ಧನರಾಜ ಸ್ವಾಮಿ, ಸುರೇಶ ಚಿಟಗೊಪಕರ್, ಮುರಳಿ ನಾಶಿ, ಪಂಚಾಕ್ಷರಿ ಕಲ್ಮಠ, ಸತೀಶ ಸ್ವಾಮಿ, ರಾಜೇಶ್ವರಿ, ಶಾಂಭವಿ ಪಾಲ್ಗೊಂಡಿದ್ದರು.