ಬೀದರ್: ಜಿಲ್ಲೆಯಲ್ಲಿ ಮೋಡ ಕವಿದ ಹಾಗೂ ತಣ್ಣನೆಯ ವಾತಾವರಣವಿದೆ. ಬೀದರ್, ಭಾಲ್ಕಿ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ಅಲ್ಲಲ್ಲಿ ಜಿಟಿ ಜಿಟಿ ಮಳೆಯಾಗಿದೆ.
ಹವಾಮಾನ ಇಲಾಖೆ ತಜ್ಞರ ಪ್ರಕಾರ ಮೂರು ದಿನ ಮೋಡ ಕವಿದ ವಾತಾವರಣ ಇರಲಿದೆ. ಜಿಲ್ಲೆಯಲ್ಲಿ ನೆಲ ತೊಯ್ಯುವಷ್ಟು ಮಳೆ ಸುರಿದಿಲ್ಲ. ಆದರೂ ತೊಗರಿ ಕಟಾವು ಮಾಡುವುದನ್ನು ಒಂದೆರೆಡು ದಿನ ಮಂದೂಡುವುದು ಒಳಿತು ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ರೈತರಿಗೆ ಸಲಹೆ ನೀಡಿದ್ದಾರೆ.
ತೊಗರಿ ರಾಶಿ ಮಾಡಿದರೆ ಅದು ಕೊಳೆಯುವ ಸಾಧ್ಯತೆ ಇದೆ. ಇಂತಹ ವಾತಾವರಣ ಕಡಲೆ ಬೆಳೆಯ ಇಳುವರಿಗೂ ಸ್ವಲ್ಪಮಟ್ಟಿಗೆ ಮಾರಕವಾಗಬಹುದು. ಜೋಳಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಕೃಷಿ ವಿಜ್ಞಾನ ಕೇಂದ್ರದ ಡಾ.ಸುನೀಲ ತಿಳಿಸಿದ್ದಾರೆ.
ಕೃಷಿ ಇಲಾಖೆ ರೈತರಿಗೆ ಯಾವುದೇ ರೀತಿಯ ಮುನ್ಸೂಚನೆ ನೀಡಿಲ್ಲ. ಎರಡು ದಿನಗಳಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇದೆ. ಬೆಳಿಗ್ಗೆ ಜಿಟಿಜಿಟಿ ಮಳೆ ಸುರಿದ ಪರಿಣಾಮ ನಗರ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.