ಬಸವಕಲ್ಯಾಣ: ‘ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಪಕ್ಷದಿಂದ ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುತ್ತದೆ’ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಶಬ್ಬೀರಪಾಶಾ ಮುಜಾವರ ತಿಳಿಸಿದರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
‘ಚುನಾವಣೆಗೆ ಸ್ಪರ್ಧಿಸಬಯಸುವ ವರು ಹೆಸರು ನೋಂದಾಯಿಸಿಕೊಳ್ಳ ಬೇಕು. ಅವರವರ ಕ್ಷೇತ್ರದಲ್ಲಿ ಪಕ್ಷದ ಪ್ರಚಾರ ಕಾರ್ಯ ಕೈಗೊಂಡು ಸದಸ್ಯರ ನೋಂದಣಿ ಮಾಡಿಸಿಕೊಂಡು ಪ್ರಥಮವಾಗಿ ಪಕ್ಷದ ಸಂಘಟನೆ ಬಲಗೊಳಿಸುವುದಕ್ಕೆ ಆದ್ಯತೆ ನೀಡಬೇಕು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾಲ್ಲೂಕಿನಲ್ಲಿನ 19,000 ರೈತರ ಸಾಲಮನ್ನಾ ಮಾಡಿದ್ದಾರೆ. ಅವರ ಕಾರ್ಯದ ಪ್ರಚಾರವೂ ಅಗತ್ಯವಾಗಿದೆ. ಇಲ್ಲಿನ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಮತಗಳು ಬಾರದಿದ್ದರೂ ಈ ವಿಧಾನಸಭಾ ಕ್ಷೇತ್ರದಲ್ಲಿ 7 ಸಲ ಜನತಾ ಪರಿವಾರದ ಅಭ್ಯರ್ಥಿ ಗೆದ್ದಿದ್ದಾರೆ. ಈ ಕಾರಣ ಇದು ಪಕ್ಷದ ಭದ್ರಕೋಟೆ ಆಗಿದೆ’ ಎಂದರು.
ಉಪ ಚುನಾವಣೆಯ ಪರಾಜಿತ ಅಭ್ಯರ್ಥಿ ಯಶ್ರಬಅಲಿ ಖಾದ್ರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆನಂದ ಪಾಟೀಲ, ಪಕ್ಷದ ನಗರ ಘಟಕದ ಅಧ್ಯಕ್ಷ ಸುಶೀಲ ಆವಸ್ಥಿ, ಪ್ರವಕ್ತಾ ಆಕಾಶ ಖಂಡಾಳೆ, ಎ.ಜಿ.ಪಾಟೀಲ, ಅರ್ಷದ ಮಹಾಗಾವಿ, ಸಂದೀಪ ಪಾಟೀಲ, ಹುಜೂರಪಾಶಾ ಮಾತನಾಡಿದರು.
ಯುವ ವಿಭಾಗದ ತಾಲ್ಲೂಕು ಅಧ್ಯಕ್ಷ ಸೂರ್ಯಕಾಂತ ರಾಜೋಳೆ, ಸಂಜಯ ಶ್ರೀವಾಸ್ತವ, ವೀರಣ್ಣ ಮೂಲಗೆ, ಶರಣಪ್ಪ ಪರೆಪ್ಪ, ರತೀಶ ಗುಂಗೆ, ದೀಪಕ ಕೋಲೆ ಉಪಸ್ಥಿತರಿದ್ದರು.