ಬಸವಕಲ್ಯಾಣ: ‘ಸಂಸ್ಕಾರವಂತರಾಗಿ ಸಂಸ್ಕೃತಿ, ಪರಂಪರೆಯನ್ನು ಪಾಲಿಸಿದರೆ ಮಾತ್ರ ಜೀವನ ಪಾವನವಾಗುತ್ತದೆ’ ಎಂದು ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಹೇಳಿದರು.
ತಾಲ್ಲೂಕಿನ ಶಿವಪುರದಲ್ಲಿ ಬುಧವಾರ ಆಯೋಜಿಸಿದ್ದ ಸಿದ್ಧಲಿಂಗೇಶ್ವರ ಮಹಾರಾಜರ 51 ನೇ ಜಾತ್ರಾ ಮಹೋತ್ಸವದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.
‘ಆಧುನಿಕ ಯುಗದಲ್ಲಿ ಭೌತಿಕವಾಗಿ ಅಪಾರ ಪ್ರಗತಿ ಸಾಧಿಸಲಾಗಿದೆ. ಆದರೆ, ಮಕ್ಕಳಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಆದ್ದರಿಂದ ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು. ಬರೀ ಕಾಟಾಚಾರಕ್ಕೆ ಧರ್ಮಾಚರಣೆ ಸಲ್ಲದು, ಸ್ವಾರ್ಥ ಸಾಧನೆಗಾಗಿಯೇ ಎಲ್ಲವನ್ನು ಮಾಡುವುದು ತಪ್ಪು. ಸಮಾಜದ ಹಿತದೃಷ್ಟಿಯಿಂದ ಕಾರ್ಯ ಕೈಗೊಳ್ಳಬೇಕು. ಇತರರ ಅಭಿವೃದ್ಧಿಯಲ್ಲಿ ಸಂತಸಗೊಳ್ಳಬೇಕು’ ಎಂದರು.
ಹಳ್ಳಿ ಆಶ್ರಮದ ಪ್ರಭಾವತಿ ತಾಯಿ ಮಾತನಾಡಿ, ‘ಈ ನೆಲ ಬಸವಾದಿ ಶರಣರು ನಡೆದಾಡಿದ ಪವಿತ್ರ ಭೂಮಿಯಾಗಿದೆ. 12ನೇ ಶತಮಾನದ ಶರಣರು ಸಮಾನತೆಯ ತತ್ವವನ್ನು ಸಾರಿದ್ದಾರೆ. ವಚನಗಳ ಮೂಲಕ ಜನಜಾಗೃತಿ ಮೂಡಿಸಿದ್ದಾರೆ. ಅವರಿಂದ ಎಲ್ಲರೂ ಪ್ರೇರಣೆ ಪಡೆಯುವುದು ಅಗತ್ಯವಾಗಿದೆ’ ಎಂದರು.
ಶರಣೆ ಬಸಮ್ಮತಾಯಿ ನೇತೃತ್ವ ವಹಿಸಿದ್ದರು. ಶಿಕ್ಷಕ ರಮೇಶ ರಾಜೋಳೆ ಮಾತನಾಡಿದರು. ಪುರವಂತರಾದ ವೆಂಕಟ ಪಂಚಾಳ, ಪ್ರಭುಲಿಂಗ ಸ್ವಾಮಿ ವೀರಭದ್ರನ ನೃತ್ಯ ಪ್ರಸ್ತುತಪಡಿಸಿದರು. ಸಂಗೀತಗಾರ ಮಲ್ಲಪ್ಪ ಕೋಟೆ, ಕೋಲಾಟ ತಂಡದ ಉಮಾ ಮೂಲಗೆ, ಭಜನಾ ತಂಡದ ಕಸ್ತೂರಬಾಯಿ ಉಮರ್ಗೆ, ಗ್ರಾಮ ಪಂಚಾಯಿತಿ ಸದಸ್ಯರಾದ ವೀರಣ್ಣ ರಾಜೋಳೆ, ಮಹೇಂದ್ರ ಲಷ್ಕರೆ ಅವರನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ವಿಶ್ವನಾಥ ಮೂಲಗೆ, ರಾಜಪ್ಪ ಉಮರ್ಗೆ, ವೀರಣ್ಣ ಶಂಭುಲಿಂಗ, ಅನಿಲಸ್ವಾಮಿ, ವಿದ್ಯಾಸಾಗರ ಮೂಲಗೆ, ಅನಿಲ ಉಮರ್ಗೆ, ಕಾಶಣ್ಣ ಉಮರ್ಗೆ, ಮಹೇಶ ಮೂಲಗೆ, ನಾಮದೇವ ಜಮಾದಾರ, ಉಮೇಶ ರಾಜೋಳೆ, ಪ್ರೇಮಸಾಗರ ಮೂಲಗೆ, ಕವಿರಾಜ ಕಿಣಗಿ, ದಿಲೀಪ ಧೂಮಾಳ, ಎಂ.ಜಿ.ರಾಜೋಳೆ, ಸಂಜೀವ ರಾಜೋಳೆ, ಶಿವಲಿಂಗ ಮೂಲಗೆ, ಜಗದೀಶ ಖಂಡಾಳೆ, ಆನಂದ ಉಮರ್ಗೆ, ಮಹೇಶ ಉಮರ್ಗೆ, ಸಿದ್ರಾಮ ಲಡಕೆ, ರವೀಂದ್ರ ಉರ್ಕೆ, ನಾಗನಾಥ ಮೇತ್ರೆ, ಕಾಶಿನಾಥ ಉಮರ್ಗೆ, ಗುಂಡಾರೆಡ್ಡಿ ಪಡಗೆ ಹಾಗೂ ಪ್ರಶಾಂತ ಉರ್ಕೆ ಇದ್ದರು.
ಇದಕ್ಕೂ ಮೊದಲು ಗ್ರಾಮದಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಸಸ್ತಾಪುರದ ಡೊಳ್ಳು ಕುಣಿತ ಹಾಗೂ ವಿವಿಧ ವಾದ್ಯ ಮೇಳದವರು ಭಾಗವಹಿಸಿದ್ದರು. ಬಳಿಕ ದೇವಸ್ಥಾನದ ಆವರಣದಲ್ಲಿನ ಅಗ್ನಿಕುಂಡದಲ್ಲಿ ಕೆಂಡ ಹಾಯುವ ಕಾರ್ಯಕ್ರಮ ನೆರವೇರಿತು. ಇಡೀ ದಿನ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.