ಔರಾದ್: 'ರೋಗಿಗಳಿಗೆ ಅತ್ಯತ್ತಮ ಸೇವೆ ನೀಡಿ ಗುಣಮುಖ ಮಾಡುವುದರಲ್ಲಿಯೇ ವೈದ್ಯರಿಗೆ ಸಂತೃಪ್ತಿ ಸಿಗುತ್ತದೆ' ಎಂದು ಹಿರಿಯ ವೈದ್ಯ ಕಲ್ಲಪ್ಪ ಉಪ್ಪೆ ಹೇಳಿದರು.
ತಾಲ್ಲೂಕಿನ ಸಂತಪುರನಲ್ಲಿ ಭಾನುವಾರ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 'ಶಿಕ್ಷಕರಂತೆ, ವೈದ್ಯರಿಗೂ ಸಮಾಜದಲ್ಲಿ ಗೌರವ ಇದೆ. ಅದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ವೈದ್ಯರು ಕೆಲಸ ಮಾಡಬೇಕಿದೆ' ಎಂದು ಸಲಹೆ ನೀಡಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ. ಮಹೇಶ ಬಿರಾದಾರ ಮಾತನಾಡಿ, 'ವೈದ್ಯಕೀಯ ವೃತ್ತಿ ಹಣ ಗಳಿಸುವ ವೃತ್ತಿಯಲ್ಲ. ಸೇವಾ ಮನೋಭಾವ ಇದ್ದವರು ಮಾತ್ರ ಈ ವೃತ್ತಿಯಲ್ಲಿ ಸೇರಿಕೊಳ್ಳಬೇಕು. ಒಬ್ಬ ರೋಗಿಯ ಸಾವು ಬದುಕು ವೈದ್ಯರ ಕೈಯಲ್ಲಿರುತ್ತದೆ. ಹೀಗಾಗಿ ಬಹಳ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕಾಗುತ್ತದೆ' ಎಂದು ಹೇಳಿದರು.
ಪ್ರಾಂಶುಪಾಲ ತುಕಾರಾಮ ಯಾತಪ್ಪ, ಡಾ. ಸೋಹೆಲ್, ಪಿಡಿಒ ಶಿವಕುಮಾರ ಘಾಟೆ, ಚಂದ್ರಕಾಂತ ನಿರ್ಮಳೆ, ಸಿದ್ದಯ್ಯ ಸ್ವಾಮಿ ಉಪಸ್ಥಿತರಿದ್ದರು. ಅನಿಲ ಜಿರೋಬೆ ಸ್ವಾಗತಿಸಿದರು. ಮಂಜುನಾಥ ಶೆಟ್ಟಿ ನಿರೂಪಿಸಿದರು. ಇದೆ ವೇಳೆ ಹಿರಿಯ ವೈದ್ಯರನ್ನು ಸನ್ಮಾನಿಸಲಾಯಿತು.