ಬೀದರ್: ಸೇವೆಯೇ ಪರಮ ಧರ್ಮವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ರಘುನಂದನ್ ಹೇಳಿದರು.
ಕೇಶವ ಕಾರ್ಯ ಸಂವರ್ಧನ ಸಮಿತಿ ಹಾಗೂ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆ ಸಹಯೋಗದಲ್ಲಿ ಇಲ್ಲಿಯ ವಂದೇ ಮಾತರಂ ಸ್ಕೂಲ್ನಲ್ಲಿ ನಡೆದ ಕೋವಿಡ್ ಕೇರ್ ಸೆಂಟರ್ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಅನೇಕರು ಜನ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಇಂತಹ ದೃಶ್ಯಗಳನ್ನು ಪುಣ್ಯ ಭೂಮಿ ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ ಎಂದರು.
ಕೋವಿಡ್ ಎದುರಿಸಲು ರೋಗನಿರೋಧಕ ಶಕ್ತಿ ವೃದ್ಧಿಗಾಗಿ ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ಮಾಡಬೇಕು ಎಂದು ಸಲಹೆ ಮಾಡಿದರು.
ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ಕೋವಿಡ್ ಕೇರ್ ಸೆಂಟರ್ನಲ್ಲಿ ಸಕಲ ಸೌಕರ್ಯಗಳೊಂದಿಗೆ ₹ 1 ರಲ್ಲೇ ಚಿಕಿತ್ಸೆ ನೀಡಲಾಗಿತ್ತು. ಜನರ ಸೇವೆ ಮಾಡುವ ಅವಕಾಶ ದೊರೆತದ್ದು ನಮ್ಮ ಸೌಭಾಗ್ಯ ಎಂದು ಹೇಳಿದರು.
ವಂದೇ ಮಾತರಂ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಶಿವರಾಜ ಪಾಟೀಲ, ಗುಂಡು ರೆಡ್ಡಿ, ವಿಜಯ ಮಹಾತೇಂಶ, ನಾಗೇಶ ರೆಡ್ಡಿ, ಹಣಮಂತರಾವ್ ಪಾಟೀಲ, ಕೃಷ್ಣಾರೆಡ್ಡಿ, ಎಸ್.ಬಿ. ಸಜ್ಜನಶೆಟ್ಟಿ, ಜೈಭೀಮ ಸೋಲಾಪುರೆ, ಡಾ. ರಾಜೇಶ ಕಾಮತಿಕರ್, ಭಗುಸಿಂಗ್ ಜಾಧವ್, ಆಕಾಶ ಪಾಟೀಲ, ಗುರುನಾಥ ರಾಜಗೀರಾ, ಹಣಮಂತ ಬುಳ್ಳಾ ಇದ್ದರು.