ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಈಶಾನ್ಯ ಪದವೀಧರ ಕ್ಷೇತ್ರ: ಅಮರನಾಥ ಪರ ಶಾಸಕ ಸುರೇಶಕುಮಾರ ಪ್ರಚಾರ

Published 28 ಮೇ 2024, 16:06 IST
Last Updated 28 ಮೇ 2024, 16:06 IST
ಅಕ್ಷರ ಗಾತ್ರ

ಬೀದರ್‌: ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಅವರ ಪರ ಶಾಸಕ ಎಸ್‌. ಸುರೇಶಕುಮಾರ ಅವರು ನಗರದಲ್ಲಿ ಮಂಗಳವಾರ ಪ್ರಚಾರ ಕೈಗೊಂಡರು.

ನಗರದ ನ್ಯಾಯಾಲಯದಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಮರನಾಥ ಪಾಟೀಲ ಅವರು ಈ ಹಿಂದೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಪದವೀಧರರ ಪ್ರೀತಿಗೆ ಪಾತ್ರರಾಗಿದ್ದಾರೆ. ಸರಳ, ಸಜ್ಜನಿಕೆಗೆ ಹೆಸರಾಗಿದ್ದಾರೆ. ಮೇಲ್ಮನೆಯ ಘನತೆ, ಗೌರವ ಕಾಪಾಡುವ ಜವಾಬ್ದಾರಿ ಮತದಾರರ ಮೇಲಿದೆ ಎಂದು ಹೇಳಿದರು.

ವಿಧಾನ ಪರಿಷತ್ತಿನ ಗೌರವ ಕಾಪಾಡಬೇಕಾದರೆ ಉತ್ತಮ ಅಭ್ಯರ್ಥಿ ಅಮರನಾಥ ಪಾಟೀಲ ಅವರಿಗೆ ನಿಮ್ಮ ಪ್ರಥಮ ಪ್ರಾಶಸ್ತ್ಯದ ಮತ ಕೊಡಬೇಕು. ಇತ್ತೀಚೆಗೆ ಮೇಲ್ಮನೆ ಎಂಬುದು ಸಿರಿವಂತರ ಮನೆಯಾಗಿ ಮಾರ್ಪಾಡಾಗುತ್ತಿರುವುದು ವಿಷಾದಕರ. ಹಣ ಖರ್ಚು ಮಾಡಿ ಮೇಲ್ಮನೆ ಪ್ರವೇಶಿಸಿದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಶಿಕ್ಷಕರ ಮತ್ತು ಪದವೀಧರರ ಸಮಸ್ಯೆಗೆ ಸ್ಪಂದಿಸುವ ಅಮರನಾಥ ಪಾಟೀಲರಿಗೆ ನಿಮ್ಮ ಬೆಂಬಲವಿರಲಿ ಎಂದು ತಿಳಿಸಿದರು.

ವಿಧಾನ ಪರಿಷತ್ ಸಭಾಪತಿ ಮಾಜಿ ರಘುನಾಥರಾವ ಮಲ್ಕಾಪುರೆ ಮಾತನಾಡಿ, ಅಮರನಾಥ ಪಾಟೀಲ ಅವರು 371 (ಜೆ) ಸಲುವಾಗಿ ವಿಧಾನ ಪರಿಷತ್‌ನಲ್ಲಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಸಮಸ್ಯೆಗೆ ಸ್ಪಂದಿಸುವ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕೆಂದು ಕೋರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ಅಮರನಾಥ ಪಾಟೀಲ ಅವರು ಚುನಾವಣೆಯ ನಂತರವೂ ಜನರಿಗೆ ಸುಲಭವಾಗಿ ಲಭ್ಯವಾಗುವಂತಹ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಸರಳ ವ್ಯಕ್ತಿ. ಇಂತಹ ಸರಳ ವ್ಯಕ್ತಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಬೇಕೆಂದು ಮನವಿ ಮಾಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪುಟ್ಟು ಪಾಟೀಲ ಮಾತನಾಡಿ, ಪ್ರತಿ ವರ್ಷ ವಕೀಲರ ಸಂಘಕ್ಕೆ ಸಿಗಬೇಕಾದ ಅನುದಾನ ಸರಿಯಾಗಿ ಸಿಗುತ್ತಿಲ್ಲ. ಯುವ ವಕೀಲರಿಗೆ ಸಿಗಬೇಕಾದ ಗೌರವ ಧನವನ್ನು ಸರ್ಕಾರದಿಂದ ತಡೆ ಹಿಡಿಯಲಾಗಿದೆ. ಈ ಸೌಲಭ್ಯವನ್ನು ಶೀಘ್ರದಲ್ಲಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ಬಿಡುಗಡೆ ಮಾಡಿಸಬೇಕೆಂದು ಶಾಸಕ ಎಸ್. ಸುರೇಶಕುಮಾರ ಅವರಿಗೆ ಮನವಿ ಮಾಡಿದರು.

ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಉಸ್ತುವಾರಿ ಬಾಬು ವಾಲಿ, ಬಿಜೆಪಿ ವಿಭಾಗೀಯ ಪ್ರಭಾರಿ ಈಶ್ವರ ಸಿಂಗ್ ಠಾಕೂರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಕಿರಣ ಪಾಟೀಲ, , ಗುರುನಾಥ ಜ್ಯಾಂತಿಕರ್ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT