ಬೀದರ್: ಭಾರತದ ಸಂವಿಧಾನವು ವಿಶ್ವದ ಅನೇಕ ಶ್ರೇಷ್ಠ ಲಿಖಿತ ಹಾಗೂ ಅಲಿಖಿತ ಸಂವಿಧಾನಗಳ ಮೌಲಿಕ ಅಂಶಗಳ ಸಂಗಮವಾಗಿದೆ ಎಂದು ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಡಾ. ಹೇಮಾವತಿ ಪಾಟೀಲ ಅಭಿಪ್ರಾಯಪಟ್ಟರು.
ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವು ದೇಶದ ಪಾಲಿಗೆ ಪರಮೋಚ್ಛ ಕಾನೂನು ಆಗಿದೆ. ದೇಶದ ಎಲ್ಲರಿಗೂ ಸಮಾನ ಹಕ್ಕು ಹಾಗೂ ಕರ್ತವ್ಯಗಳನ್ನು ಕೊಟ್ಟಿದೆ ಎಂದು ತಿಳಿಸಿದರು.
ಮತ ಹಕ್ಕು ಸಂವಿಧಾನ ನೀಡಿರುವ ಹಕ್ಕುಗಳಲ್ಲಿ ಒಂದಾಗಿದೆ. ಒಳ್ಳೆಯ ಪ್ರತಿನಿಧಿ ಹಾಗೂ ಉತ್ತಮ ಸರ್ಕಾರದ ಆಯ್ಕೆಗಾಗಿ ಅರ್ಹ ಪ್ರತಿಯೊಬ್ಬರೂ ತಪ್ಪದೇ ಮತಾಧಿಕಾರ ಚಲಾಯಿಸಬೇಕು. ಈ ಮೂಲಕ ಸಂವಿಧಾನದ ಆಶಯ ಈಡೇರಿಕೆಗೆ ಕೈಜೋಡಿಸಬೇಕು ಎಂದು ಹೇಳಿದರು.
ಕಾಲೇಜಿನ ಮತದಾನ ಸಾಕ್ಷರತಾ ಸಮಿತಿಯ ಸಮನ್ವಯಾಧಿಕಾರಿ ಡಾ. ಸಂದೀಪ್ ತಿವಾರಿ ಅವರು ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಡಾ. ಶ್ರೀಕಾಂತ ಮೋಹನರಾವ್, ಪ್ರೊ. ರಾಜಕುಮಾರ ಹೊಸದೊಡ್ಡೆ, ಪ್ರೊ. ಊರ್ವಶಿ ಕೊಡ್ಲಿ, ಡಾ. ಮಹೇಶ್ವರಿ ಹೇಡೆ, ಸತ್ಯಶೀಲಾ, ಅಯೂಬ್ ಅಹಮ್ಮದ್ ಇದ್ದರು.