ಹುಲಸೂರ: ಪಟ್ಟಣದ ಬಸವಕಲ್ಯಾಣ-ಭಾಲ್ಕಿ ಮುಖ್ಯ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ. ವಾರದ ಹಿಂದೆ ರಸ್ತೆ ದುರಸ್ತಿ ಕಾಮಗಾರಿ ಮಾಡಲಾಗಿದ್ದು, ವಾರ ಕಳೆಯುವ ಮೊದಲೇ ಮತ್ತೆ ಹದಗೆಟ್ಟಿದ್ದು. ಕಳಪೆ ಕಾಮಗಾರಿ ಆಗಿದ್ದರಿಂದ ಹಾಳಾಗಿದೆ ಎಂದು ಜನರು ದೂರಿದ್ದಾರೆ.
ಕಳೆದ ವಾರ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಶಿವಶಂಕರ ಕಾಮಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಎಲ್ಲೆಲ್ಲಿ ರಸ್ತೆ ಹಾಳಾಗಿದೆ ಎಂಬುದನ್ನು ಪರಿಶೀಲಿಸಿದರು. ಅದರ ಬೆನ್ನಲ್ಲೇ ರಸ್ತೆ ಸುಧಾರಣೆ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಆದರೆ ಮತ್ತೆ ರಸ್ತೆ ಅದೇ ಸ್ಥಿತಿಗೆ ತಲುಪಿದ್ದು ಅಧಿಕಾರಿಗಳ ಎದುರೇ ಇಂತಹ ಕೆಲಸ ಮಾಡಿದರೆ ಹೇಗೆ ಎಂಬುದು ಸಾರ್ವಜನಿಕರು ಆರೋಪಿಸಿದ್ದಾರೆ.
ಪಟ್ಟಣದ ಮುಖ್ಯರಸ್ತೆ ಸಂಪೂರ್ಣ ಕಿತ್ತು ಹೋಗಿದರಿಂದ, ವಾಹನ ಸವಾರರು ಬಿದ್ದು ಗಾಯ ಮಾಡಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಹದಗೆಟ್ಟ ರಸ್ತೆಯಲ್ಲಿ ಸಂಚಾರ ಮಾಡುವಾಗ ಅನೇಕ ಬೈಕ್ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಈ ಮಾರ್ಗದಲ್ಲಿ ಜೀಪ್, ಟಂಟಂಗಳು ಸಾಗುತ್ತವೆ.
’ತಗ್ಗು ಬಿದ್ದಿರುವ ರಸ್ತೆ ಸುಧಾರಣೆ ಮಾಡುವಲ್ಲಿ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ ಮಾಡುತ್ತಿದೆ’ ಎಂದು ವಾಹನ ಮಾಲೀಕರು ಆರೋಪಿದ್ದು, ಕೂಡಲೇ ರಸ್ತೆ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.