ಬೀದರ್: ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಂಪಿ ವೃತ್ತದಿಂದ ನಗರದ ಬಹಮನಿ ಕೋಟೆಯಲ್ಲಿ ಭಾನುವಾರ ವಿಶ್ವ ಪಾರಂಪರಿಕ ಸಪ್ತಾಹ ಆಚರಿಸಲಾಯಿತು.
ನಗರದ ಮಹಾತ್ಮ ಜ್ಯೋತಿಬಾ ಫುಲೆ ಹಿರಿಯ ನಾಗರಿಕರ ವೃದ್ಧಾಶ್ರಮದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಗೌರವಿಸಿ ಕೋಟೆಯ ವಿವಿಧ ಸ್ಮಾರಕಗಳನ್ನು ಪರಿಚಯಿಸಿ ಅವುಗಳ ಮಹತ್ವ ಸಾರಿದರು. ರಾಜರ ಸ್ನಾನಗೃಹ, ಸೋಲಹ ಕಂಬ ಮಸೀದಿ, ತರ್ಕಿಸ್ ಮಹಲ್ ಸೇರಿದಂತೆ ಇತರೆ ಸ್ಮಾರಕಗಳನ್ನು ತೋರಿಸಿದರು.
‘ಹಿರಿಯ ನಾಗರಿಕರಿಗೆ ಸಾಮಾನ್ಯವಾಗಿ ಕೋಟೆ ನೋಡುವುದು ಬಹಳ ಕಷ್ಟದ ಕೆಲಸ. ವಿಶ್ವ ಪಾರಂಪರಿಕ ಸಪ್ತಾಹದ ಅಂಗವಾಗಿ ಅವರಿಗೆ ಈ ಅವಕಾಶ ಕಲ್ಪಿಸಿಕೊಡಲಾಗಿದೆ. ಎಲ್ಲರಂತೆ ಅವರು ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯ ಸ್ಮಾರಕಗಳನ್ನು ಕಣ್ತುಂಬಿಕೊಳ್ಳಲು ಎನ್ನುವುದು ಇದರ ಉದ್ದೇಶ’ ಎಂದು ಹಂಪಿ ವೃತ್ತದ ಅಡಿಯಲ್ಲಿ ಬರುವ ಬೀದರ್ ಉಪ ವೃತ್ತದ ಉಸ್ತುವಾರಿ ಅನಿರುದ್ಧ್ ದೇಸಾಯಿ ತಿಳಿಸಿದರು.
‘ಈ ವರ್ಷ ಪುರಾತತ್ವ ಸರ್ವೇಕ್ಷಣ ಇಲಾಖೆ ಹಂಪಿ ವೃತ್ತದಿಂದ ಒಟ್ಟು ಏಳು ಪ್ರಮುಖ ಸ್ಥಳಗಳಲ್ಲಿ ವಿಶ್ವ ಪಾರಂಪರಿಕ ಸಪ್ತಾಹ ಆಚರಿಸಲಾಗುತ್ತಿದ್ದು, ಬೀದರ್ ಕೋಟೆಯಿಂದ ಚಾಲನೆ ಸಿಕ್ಕಿರುವುದು ಸಂತಸದ ಸಂಗತಿ’ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಉಪವಿಭಾಗಾಧಿಕಾರಿ ಲವೀಶ್ ಒರ್ಡಿಯಾ ಚಾಲನೆ ನೀಡಿದರು. ಹಂಪಿ ವೃತ್ತ ಸೂಪರಿಟೆಂಡೆಂಟ್ ನಿಹಿಲ್ದಾಸ್, ಪುರಾತತ್ವ ಇಲಾಖೆಯ ಅಧಿಕಾರಿ ಮಹಮ್ಮದ್ ನಜೀರ್ ಹುಸೇನ್ ಹಾಜರಿದ್ದರು.