ಹುಮನಾಬಾದ್: ವಿದ್ಯಾರ್ಥಿಗಳು ಓದಿನಷ್ಟೆ ಮಹತ್ವ ಕ್ರೀಡೆಗೂ ನೀಡಬೇಕು. ಹೆಚ್ಚು ಶ್ರಮ ಬೇಡುವ ಕ್ರೀಡೆಯಲ್ಲಿ ಪಾಲ್ಗೊಳ್ಳುವುದಕ್ಕೆ ಸಾಧ್ಯವಾಗದಿದ್ದರೆ ಪ್ರತಿಯೊಬ್ಬ ವಿದ್ಯಾರ್ಥಿಕನಿಷ್ಠ ಓಟದಲ್ಲಾದರೂ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಲಕ್ಷ್ಮಿವೆಂಕಟೇಶ್ವರ ಬಾಲಭಾರತಿ ವಿದ್ಯಾಮಂದಿರ ಕಾರ್ಯದರ್ಶಿ ಶಿವಶಂಕರ ತರನಳ್ಳಿ ಹೇಳಿದರು.
ಸಂಸ್ಥೆಯ ವಾರ್ಷಿಕೋತ್ಸವ ಅಂಗವಾಗಿ ಈಚೆಗೆ ಏರ್ಪಡಿಸಿದ್ದ ಶಾಲಾ ಮಟ್ಟದ ಕ್ರೀಡಾಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಉಮಾಕಾಂತ ಕುಂಬಾರ ಮಾತನಾಡಿ, ಮನುಷ್ಯನಿಗೆ ಆಹಾರದಷ್ಟೇ ಕ್ರೀಡೆಮುಖ್ಯ. ಈ ಭಾಗದವರಲ್ಲಿ ಇರುವ ಹಿಂದುಳಿದವರು ಎಂಬ ಮನೋಭಾವನೆ ಹೊಡೆದೋಡಿಸಲು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ಯಾರಿಗೂ ಕಮ್ಮಿಯಲ್ಲ ಎಂಬುದನ್ನು ಸಾಬೀತುಪಡಿಸಬೇಕು ಎಂದು ತಿಳಿಸಿದರು.
ಸಬ್ ಇನ್ಸ್ಪೆಕ್ಟರ್ ಎಲ್.ಬಿ ಅಗ್ನಿ ಸ್ಪರ್ಧೆ ಉದ್ಘಾಟಿಸಿದರು. ಸಂಸ್ಥೆಯ ನಿರ್ದೇಶಕ ನಾರಾಯಣರಾವ ಚಿದ್ರಿ ಮಾತನಾಡಿ, ’ಊಟ ಬಲ್ಲವನಿಗೆ ರೋಗವಿಲ್ಲ. ’ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬ ಹಿರಿಯರ ಮಾತನ್ನು ವಿದ್ಯಾರ್ಥಿಗಳು ಜೀವನದಲ್ಲಿ ಮರೆಯಬಾರದು ಎಂದರು.
ಪ್ರೌಢಶಾಲೆ ಮುಖ್ಯಶಿಕ್ಷಕ ಕೆ.ಕೆ ಯರಂತೇಲಿ ಮಠ್, ಪ್ರಾಥಮಿಕ ವಿಭಾಗದ ಅಶೋಕಕುಮಾರ ವಡ್ಡನಕೇರಿ ಇದ್ದರು.
ದಿಲೀಪಕುಮಾರ ಗಾಯಕವಾಡ ನಿರೂಪಿಸಿದರು. ಉದಯಕುಮಾರ ಕಲ್ಲೂರ ವಂದಿಸಿದರು.