ಚಾಮರಾಜನಗರ: ಜಿಲ್ಲೆಯಲ್ಲಿ ಸೋಮವಾರ ಇಬ್ಬರು ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ಒಬ್ಬರು ಕೋವಿಡ್ ಕಾರಣದಿಂದ ಮೃತಪಟ್ಟಿದ್ದರೆ, ಮತ್ತೊಬ್ಬರು ಕೋವಿಡ್ಯೇತರ ಕಾರಣದಿಂದ ನಿಧನರಾಗಿದ್ದಾರೆ.
ಕೊಳ್ಳೇಗಾಲದ 62 ವರ್ಷ ಮಹಿಳೆ ಅ.10ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಮೃತಪಟ್ಟಿದ್ದಾರೆ. ತಮಿಳುನಾಡಿನ ಈರೋಡ್ ಜಿಲ್ಲೆಯ ನಿವಾಸಿ 85 ವರ್ಷದ ವೃದ್ಧ ಅ.12ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ (ಅ.17) ಮೃತಪಟ್ಟಿದ್ದರು. ನಂತರ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿತ್ತು.
ಇದರೊಂದಿಗೆ, ಜಿಲ್ಲೆಯಲ್ಲಿ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ 86ಕ್ಕೆ ಹಾಗೂ ಕೋವಿಡ್ಯೇತರ ಕಾರಣದಿಂದ ನಿಧನರಾದವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.
ಸೋಮವಾರ 107 ಮಂದಿ ಗುಣಮುಖರಾಗಿದ್ದಾರೆ. 54 ಹೊಸ ಪ್ರಕರಣಗಳು ದೃಢಪಟ್ಟಿವೆ.
ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ:ಜಿಲ್ಲೆಯಲ್ಲಿ ಇದುವರೆಗೆ 4,672 ಮಂದಿ ಸೋಂಕು ಮುಕ್ತರಾಗಿದ್ದು, 5,491 ಕೋವಿಡ್ ಪ್ರಕರಣಗಳು ವರದಿಯಾಗಿವೆ. 702 ಸಕ್ರಿಯ ಪ್ರಕರಣಗಳಿವೆ. 223 ಮಂದಿ ಹೋಂ ಐಸೊಲೇಷನ್ನಲ್ಲಿದೆ. 43 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ 310 ಮಂದಿಯ ಗಂಟಲು ದ್ರವದ ಮಾದರಿಗಳ ಪರೀಕ್ಷೆ ವರದಿ ಬಂದಿದ್ದು, 257 ಮಂದಿಯ ವರದಿ ನೆಗೆಟಿವ್ ಬಂದಿವೆ. 53 ಜನರಿಗೆ ಸೋಂಕು ಇರುವುದು ಖಚಿತವಾಗಿದೆ. ಒಂದು ಪ್ರಕರಣ ಮೈಸೂರಿಗೆ ದೃಢಪಟ್ಟಿದೆ.
ಚಾಮರಾಜನಗರ ತಾಲ್ಲೂಕಿನ 20, ಗುಂಡ್ಲುಪೇಟೆ 13, ಕೊಳ್ಳೇಗಾಲದ 10 ಹನೂರು ಮತ್ತು ಯಳಂದೂರು ತಾಲ್ಲೂಕುಗಳಲ್ಲಿ ತಲಾ ಐವರಿಗೆ ಸೋಂಕು ತಗುಲಿದೆ. ಹೊರ ಜಿಲ್ಲೆಯವರು ಒಬ್ಬರಿದ್ದಾರೆ.