ಚಾಮರಾಜನಗರ: ಜಿಲ್ಲೆಯ ವಿವಿಧ ಕಡೆಗಳಲ್ಲಿ ಸೋಮವಾರ ತಡ ರಾತ್ರಿ ಮಳೆಯಾಗಿದೆ. ಕೆಲವು ಕಡೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ಬೆಳೆ ಹಾನಿ ಸಂಭವಿಸಿದೆ.
ತಾಲ್ಲೂಕಿನಕಿಲಗೆರೆ ಗ್ರಾಮದಲ್ಲಿ ಅನೇಕ ರೈತರು, ಬೆಳೆದಿದ್ದ ಬಾಳೆ ಫಸಲು ನೆಲಕ್ಕಚ್ಚಿದ್ದು, ನಷ್ಟ ಅನುಭವಿಸಿದ್ದಾರೆ.
ಗ್ರಾಮದ ಬೆಳ್ಳಪ್ಪ ಎಂಬುವವರ ಎರಡು ಎಕರೆ ಜಮೀನಿನಲ್ಲಿ ಕಟಾವು ಹಂತಕ್ಕೆ ಬಂದಿದ್ದ 1,500 ಬಾಳೆ, ಮಹದೇವಪ್ಪ ಅವರಿಗೆ ಸೇರಿದ 500, ಪ್ರಕಾಶ್ ಎಂಬುವವರ 600, ಗುರುಸಿದ್ದಪ್ಪ ಅವರ 700, ನಾಗಪ್ಪ ಎಂಬುವವರ 1000 ಬಾಳೆ ಗಿಡಗಳು ಧರೆಗುರುಳಿವೆ.
ಕಳೆದ ವಾರವೂ ಬೀಸಿದ ಗಾಳಿಗೆ ಅನೇಕರ ಬಾಳೆ ತೋಟಗಳಿಗೆ ಹಾನಿ ಸಂಭವಿಸಿತ್ತು. ತೋಟಗಾರಿಕಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.