ಕೊಳ್ಳೇಗಾಲ: ಇಲ್ಲಿನ ಲಿಂಗಣಾಪುರ ಬಡಾವಣೆ ಮೃತ ಯುವಕ ನಂದೀಶ್ ಮನೆಗೆ ಗುರುವಾರ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಹಾಗೂ ಮುಖಂಡರು ಭೇಟಿ ನೀಡಿ ಸಾಂತ್ವನ ಹೇಳಿದರು.
ನಂತರ ಮಾತನಾಡಿದ ಅವರು, ‘ಸಾವಿನ ಮನೆಯಲ್ಲಿ ಯಾರೂ ರಾಜಕಾರಣ ಮಾಡಬಾರದು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮೃತರ ಕುಟುಂಬಕ್ಕೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕು. ನಗರ ಪೊಲೀಸ್ ಠಾಣೆಯ ಪಿಎಸ್ಐ ಮಹೇಶ್ ಕುಮಾರ್ ಕರ್ತವ್ಯ ಲೋಪ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಉನ್ನತ ಮಟ್ಟದ ತನಿಖೆ ನಡೆಸಿ ನ್ಯಾಯ ದೊರಕಿಸಿ ಕೊಡುವುದಾಗಿ ಐಜಿಪಿ ಹೇಳಿದ್ದಾರೆ. ನಗರದ ಬಸ್ ನಿಲ್ದಾಣದಲ್ಲಿ ಬೀಟ್ ಪೊಲೀಸರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಮಾಹಿತಿ ದೊರೆತಿದೆ. ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿ ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದಾಗಿ ಹೇಳುತ್ತೇನೆ. ಜೊತೆಗೆ ಯಾರೇ ತಪ್ಪು ಮಾಡಿದರೂ ಸರಿ ಅವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ರಾಮಕೃಷ್ಣ, ಕವಿತಾ, ಚಿಂತು ಪರಮೇಶ್, ಮುಖಂಡರು ಜಗದೀಶ್ ಶಂಕನಪುರ, ಸತೀಶ್, ಪ್ರಭುಸ್ವಾಮಿ, ವಕೀಲ ರಾಜೇಂದ್ರ, ಅಗಸ್ಟಿನ್, ನಗರ ಮಂಡಲ ಎಸ್ಸಿ ಮೋರ್ಚಾ ಅಧ್ಯಕ್ಷ ಸಿದ್ದಪ್ಪಾಜಿ, ಸೋಮಣ್ಣ ಉಪ್ಪಾರ್, ಜಿಲ್ಲಾ ವಕ್ತಾರ ಬಸವರಾಜಪ್ಪ, ಬೆಂಡರಹಳ್ಳಿ ಮಹೇಶ್ ಇದ್ದರು.