ಚಾಮರಾಜನಗರ: ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ವನ್ಯಜೀವಿ ವಲಯದ ವ್ಯಾಪ್ತಿಯಲ್ಲಿ ಬರುವ ಕಾಳಿಕಾಂಬ ಕಾಲೊನಿ ಬಳಿಯ ಕುರುಬನಕಟ್ಟೆ ಅರಣ್ಯ ಪ್ರದೇಶದಲ್ಲಿ ಗಂಡು ಹುಲಿಯೊಂದು ಕೆಲವು ದಿನಗಳ ಹಿಂದೆ ಮೃತಪಟ್ಟಿದೆ.
ಆ ಪ್ರದೇಶದಲ್ಲಿ ಕೊಳೆತ ವಾಸನೆ ಬರುತ್ತಿದ್ದುದನ್ನು ಗಮನಿಸಿ ಮೇ 2ರಂದು ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾಗ ಮೃತದೇಹ ಪತ್ತೆಯಾಗಿದೆ.
ಒಂದೆರಡು ದಿನಗಳ ಹಿಂದೆ ಮೃತಪಟ್ಟಿರುವ ಸಾಧ್ಯತೆ ಇದೆ.ಹುಲಿಗೆ 12 ವರ್ಷ ವಯಸ್ಸಾಗಿದ್ದು, ವಯೋ ಸಹಜವಾಗಿ ಮೃತಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಐದಾರು ತಿಂಗಳ ಹಿಂದೆ ಕಾಳಿಕಾಂಬ ಕಾಲೊನಿ ಭಾಗದಲ್ಲಿ ಹುಲಿಯ ಉಪಟಳ ಹೆಚ್ಚಿದ್ದು, ಹಲವು ಜಾನುವಾರುಗಳ ಮೇಲೆ ದಾಳಿ ನಡೆಸಿತ್ತು. ಅದರ ಸೆರೆಗಾಗಿ ಅರಣ್ಯ ಇಲಾಖೆ ಪ್ರಯತ್ನಪಟ್ಟಿದ್ದರೂ, ಸೆರೆ ಸಿಕ್ಕಿರಲಿಲ್ಲ. ಆ ಬಳಿಕ ಅದರ ಹಾವಳಿ ಕಡಿಮೆಯಾಗಿತ್ತು.