ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ಭಾನುವಾರ ಸಾವಿರಾರು ಭಕ್ತರು ಪ್ರಯಾಣಿಸಿ, ದೇವರ ದರ್ಶನ ಪಡೆದರು. ತಾಂತ್ರಿಕ ಸಮಸ್ಯೆಯಿಂದ ಬಸ್ ಕೆಟ್ಟು ನಿಂತ ಪರಿಣಾಮ ಭಕ್ತೆಯರು ಮತ್ತೊಂದು ಬಸ್ ಹತ್ತಲು ಪರದಾಡಿದರು.
ಪಟ್ಟಣದಿಂದ ಬೆಟ್ಟಕ್ಕೆ ಕೆಎಸ್ಆರ್ ಟಿಸಿ ಬಸ್ ಸಂಚರಿಸುತ್ತವೆ. ಬೆಳಗಿನಿಂದ ಸಂಜೆ ತನಕ 50ಕ್ಕೂ ಹೆಚ್ಚಿನ ಟ್ರಿಪ್ಗಳಲ್ಲಿ ಭಕ್ತರು ತೆರಳುತ್ತಾರೆ. ಅಗತ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರು ಬಸ್ ಏರುವುದರಿಂದ ನಿರ್ವಾಹಕ ಮತ್ತು ಚಾಲಕರು ಸುರಕ್ಷತೆಯಿಂದ ಬಸ್ ಚಾಲನೆ ಮಾಡುವುದು ಸವಾಲಾಗಿದೆ. ಬೆಟ್ಟದ ರಸ್ತೆ ತಿರುವುಗಳಲ್ಲಿ ಬಸ್ ಏರುವಾಗ ಮತ್ತು ಇಳಿಯುವಾಗ ಅಪಾಯ ಎದುರಿಸಬೇಕಿದೆ ಎನ್ನುತ್ತಾರೆ ನಂಜನಗೂಡು ರತ್ನಮ್ಮ.
‘ಭಾನುವಾರ ಸಂಚರಿಸುವ ಬಸ್ಗಳಿಗೆ ಮಿತಿಗಿಂತ ಹೆಚ್ಚಿನ ಪ್ರಯಾಣಿಕರು ಇದ್ದರು. ಬಸ್ ದೃಢತೆ ಕಳೆದುಕೊಂಡು ಕಟ್ಟು ನಿಂತಿತು. ಹಾಗಾಗಿ, ಈ ಮಾರ್ಗದಲ್ಲಿ ಉತ್ತಮ ಬಸ್ ಸಂಚರಿಸಬೇಕು. ರಿಪೇರಿ ಇರುವ ಬಸ್ಗಳನ್ನು ಮಾರ್ಗದಿಂದ ಹಿಂತೆಗೆದುಕೊಳ್ಳಬೇಕು’ ಎಂದು ಪ್ರವಾಸಿ ಪ್ರದೀಪ ಹೇಳಿದರು.
ಮಂಜಿಗುಂಡಿ ಪೋಡಿನ ಸಮೀಪ ತಾಂತ್ರಿಕ ತೊಂದರೆಯಿಂದ ಬಸ್ ಸ್ಥಗಿತವಾಯಿತು. ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿ, ಮತ್ತೊಂದು ಬಸ್ ಮೂಲಕ ಕಳುಹಿಸಲಾಯಿತು ಎಂದು ಚಾಲಕ ರಮೇಶ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.