ಚಾಮರಾಜನಗರ: ನಗರದ ಮಾರುಕಟ್ಟೆಗೆ ಮಾವಿನ ಹಣ್ಣುಗಳು ಲಗ್ಗೆ ಇಟ್ಟಿವೆ.
ಎರಡು ವಾರಗಳಿಂದ ತೋತಾಪುರಿ ಮಾವಿನ ಕಾಯಿ ಬಂದಿತ್ತು. ವಾರದಿಂದೀಚೆಗೆ ರಸಪುರಿ, ಸಿಂಧೂರ ತಳಿಗಳ ಮಾವಿನಹಣ್ಣು ಲಗ್ಗೆ ಇಟ್ಟಿದೆ. ಎರಡು ದಿನಗಳಿಂದ ಬಾದಾಮಿ ಮಾವಿನ ಹಣ್ಣುಗಳೂ ಸಿಗುತ್ತಿವೆ.
ಈ ಬಾರಿ ಮಾವಿನ ಸೀಸನ್ ಆರಂಭ ವಿಳಂಬವಾಗಿದೆ. ಈಗಷ್ಟೇ ಮಾರುಕಟ್ಟೆಗೆ ಬರುತ್ತಿರುವುದರಿಂದ ಬೆಲೆ ಕೊಂಚ ಜಾಸ್ತಿಯೇ ಇದೆ. ಬಾದಾಮಿ, ರಸಪುರಿ ಹಣ್ಣುಗಳಿಗೆ ಕೆಜಿಗೆ ₹120 ಇದೆ. ಸಿಂಧೂರ ಹಣ್ಣಿಗೆ ₹100 ಇದೆ.
ಹಾಪ್ಕಾಮ್ಸ್ನಲ್ಲಿ ಸಿಂಧೂರ ಮತ್ತು ರಸಪುರಿ ತಳಿಯ ಹಣ್ಣುಗಳು ಮಾತ್ರ ಲಭ್ಯವಿವೆ. ಬೆಲೆ ಕ್ರಮವಾಗಿ ₹100, ₹120 ಇದೆ.
ಈ ಬಾರಿ ಮಾವಿನ ಕಟಾವು ವಿಳಂಬವಾಗಿರುವುದರಿಂದ ಬರುವುದು ತಡವಾಗಿದೆ. ಆರಂಭದಲ್ಲಿ ಯಾವಾಗಲೂ ಬೆಲೆ ಹೆಚ್ಚಿರುತ್ತದೆ. ಮಾರುಕಟ್ಟೆಗೆ ಹೆಚ್ಚು ಆವಕವಾಗುತ್ತಿದ್ದಂತೆಯೇ ಬೆಲೆ ಇಳಿಯುತ್ತದೆ. ಎಲ್ಲ ತಳಿಗಳ ಮಾವಿನ ಹಣ್ಣುಗಳು ಇನ್ನೂ ಬಂದಿಲ್ಲ. ಕೆಲವಷ್ಟೇ ಸಿಗುತ್ತಿವೆ’ ಎಂದು ಹಾಪ್ಕಾಮ್ಸ್ ವ್ಯಾಪಾರಿ ಮಧು ಹೇಳಿದರು.
ತೋತಾಪುರಿ ಮಾವು ಎಲ್ಲೆಡೆ ಲಭ್ಯವಿದ್ದು, ಎಳೆ ಕಾಯಿ, ಬಲಿತ ಕಾಯಿಗಳನ್ನು ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ. ಬೆಲೆ ₹50ರಿಂದ ₹100ರವರೆಗೂ ಹೇಳುತ್ತಿದ್ದಾರೆ.
ಇತರೆ ಹಣ್ಣುಗಳ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ. ಹಾಪ್ಕಾಮ್ಸ್ನಲ್ಲಿ ಸೇಬಿಗೆ ₹180 ಇದೆ. ದಾಳಿಂಬೆಗೆ ₹140 ಇದೆ. ಮಾರುಕಟ್ಟೆಯಲ್ಲಿ ದ್ರಾಕ್ಷಿ ಹೆಚ್ಚಿನ ಪ್ರಮಾಣದಲ್ಲಿ ಇದ್ದರೂ, ಬೆಲೆ ಇಳಿದಿಲ್ಲ. ಕೆಜಿಗೆ ₹80 ಇದೆ. ಕಿತ್ತಳೆಗೆ ₹100 ಇದ್ದರೆ, ಮೂಸಂಬಿಗೆ ₹80 ಹೇಳುತ್ತಿದ್ದಾರೆ.
ಬೇಸಿಗೆಯ ಬೇಗೆ ಮುಂದುವರಿದಿರುವುದರಿಂದ ಕಲ್ಲಂಗಡಿ, ಖರಬೂಜ ಹಣ್ಣುಗಳಿಗೆ ಬೇಡಿಕೆ ಮುಂದುವರಿದಿದೆ.
ಇಳಿದ ಬೀನ್ಸ್ ಬೆಲೆ: ತರಕಾರಿಗಳ ಪೈಕಿ ಬೀನ್ಸ್ ಬೆಲೆ ಈ ವಾರ ಕಡಿಮೆಯಾಗಿದೆ. ಹೋದ ವಾರಾಂಭದಲ್ಲಿ ₹100ಕ್ಕೆ ಏರಿದ್ದ ಬೆಲೆ ನಂತರ ಮತ್ತೆ ₹20 ಹೆಚ್ಚಾಗಿ ₹120ಕ್ಕೆ ತಲುಪಿತ್ತು. ಎರಡು ದಿನಗಳ ಹಿಂದೆ ಬೆಲೆಯಲ್ಲಿ ಇಳಿಕೆಯಾಗಿದ್ದು, ಈಗ ₹80ಕ್ಕೆ ನಿಂತಿದೆ.
ಟೊಮೆಟೊ (₹30), ಮೂಲಂಗಿ (₹40) ಈರುಳ್ಳಿ (₹25), ಕ್ಯಾರೆಟ್ (₹60) ಸೇರಿದಂತೆ ಇತರೆ ಎಲ್ಲ ತರಕಾರಿಗಳ ಬೆಲೆ ಸ್ಥಿರವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.