ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ವೆಂಕಟರಮಣಸ್ವಾಮಿಗೆ ಒಲಿದ ನಾಟಕ ಅಕಾಡೆಮಿ ಪ್ರಶಸ್ತಿ

Last Updated 5 ಫೆಬ್ರುವರಿ 2021, 16:34 IST
ಅಕ್ಷರ ಗಾತ್ರ

ಚಾಮರಾಜನಗರ: 2020ನೇ ಸಾಲಿನ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ನಗರದ ರಂಗಭೂಮಿ ಕಲಾವಿದ ವೆಂಕಟರಮಣಸ್ವಾಮಿ ಅವರು ಆಯ್ಕೆಯಾಗಿದ್ದಾರೆ.

71 ವರ್ಷ ವಯಸ್ಸಿನ ವೆಂಕಟರಮಣಸ್ವಾಮಿ ಅವರು ನಗರದ ಅಂಬೇಡ್ಕರ್‌ ಬಡಾವಣೆ ನಿವಾಸಿ. ಗ್ರಾಮೀಣ ಮತ್ತು ವೃತ್ತಿ ರಂಗಭೂಮಿಯಲ್ಲಿ 50 ವರ್ಷಗಳಿಗಿಂತಲೂ ಹೆಚ್ಚು ಸಮಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಹಾಡುಗಾರರಾಗಿ, ನಟರಾಗಿ ಕಲಾ ಸೇವೆ ಮಾಡಿರುವ ಅವರು ಅಪ್ಪಟ ಗ್ರಾಮೀಣ ರಂಗ ಪ್ರತಿಭೆ.

ಕಲೆಯ ನಂಟು ವೆಂಕಟರಮಣಸ್ವಾಮಿ ಅವರಿಗೆ ವಂಶ ಪಾರಂಪರ್ಯವಾಗಿ ಬಂದ ಬಳುವಳಿ. ಕೊಂಬಿನ ಹೊನ್ನಯ್ಯ ಎಂದೇ ಖ್ಯಾತರಾಗಿದ್ದ ಹೊನ್ನಯ್ಯ ಅವರ ಮೊಮ್ಮಗ. ಇವರಿಗೆ ಬಾಲ್ಯದಿಂದಲೇ ಕಲೆಯ ಸೆಳೆತವಿತ್ತು. ಅವರು ಆಯ್ಕೆ ಮಾಡಿಕೊಂಡಿದ್ದು ಹಾಡುಗಾರಿಕೆಯನ್ನು. ಡಾ.ಬಿ.ಆರ್‌.ಅಂಬೇಡ್ಕರ್‌ ಬಡಾವಣೆಯ ರಾಮಮಂದಿರದಲ್ಲಿ ನಡೆಯುತ್ತಿದ್ದ ಭಜನೆ, ಆರಾಧನೆ ಕಾರ್ಯಕ್ರಮಗಳು ಅವರ ಕಲಾ ಪ್ರೌಢಿಮೆ ಪ್ರದರ್ಶನಕ್ಕೆ ವೇದಿಕೆಯಾಗಿದ್ದವು.

ಬಡಾವಣೆಯಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ಬಯಲು ನಾಟಕ ಪ್ರದರ್ಶನದಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ದಕ್ಷಯಜ್ಞ, ತ್ರಿಜನ್ಮ ಮೋಕ್ಷ, ಕುರುಕ್ಷೇತ್ರ ರಾಜಸುಯಾಗ, ಸಂಪೂರ್ಣ ರಾಮಾಯಣ, ದಾನಶೂರ ಕರ್ಣ, ರತ್ನ ಮಾಂಗಲ್ಯ, ಗಂಡನ ಮನೆ, ಅರಿಸಿನ ಕುಂಕುಮ... ಹೀಗೆ ಹಲವು ಪ್ರತಿಷ್ಠಿತ ನಾಟಕಗಳಲ್ಲಿ ಬಣ್ಣ ಹಚ್ಚಿ ಜನಮೆಚ್ಚುಗೆ ಗಳಿಸಿದ್ದಾರೆ.ಬಿಳಿಗಿರಿರಂಗನಬೆಟ್ಟ, ಮಹದೇಶ್ವರ ಬೆಟ್ಟ, ಚಿಕ್ಕಲ್ಲೂರು, ಕಪ್ಪಡಿ, ಚಾಮರಾಜನಗರ ದಸರಾ ಮಹೋತ್ಸವದಲ್ಲಿ ನಡೆಯುವ ನಾಟಕೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.

ಬಸವೇಶ್ವರ ಕಲಾ ಬಳಗವು ಬಣ್ಣದ ಬಸವರಾಜಪ್ಪ ರಂಗ ಪ್ರಶಸ್ತಿ ನೀಡಿ ಗೌರವಿಸಿದೆ. ರಂಗವಾಹಿನಿ ಕನ್ನಡ ಸಾಹಿತ್ಯ ಪರಿಷತ್ತು ಕೂಡ ಇವರನ್ನು ಸನ್ಮಾನಿಸಿದೆ.

ಸಂತಸವಾಗಿದೆ:ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ‘ಪ್ರಜಾವಾಣಿ’ಯೊಂದಿಗೆ ಖುಷಿ ಹಂಚಿಕೊಂಡ ವೆಂಕಟರಮಣಸ್ವಾಮಿ ಅವರು, ‘ಚಿಕ್ಕಂದಿನಿಂದಲೇ ರಂಗಭೂಮಿ ಬಗ್ಗೆ ಒಲವಿತ್ತು. ಹಾಡುಗಾರಿಕೆ ಹಾಗೂ ಹಲವು ಪಾತ್ರಗಳಲ್ಲಿ ನಟಿಸಿದ್ದೇನೆ. ನನ್ನಲ್ಲಿರುವ ಕಲೆಯನ್ನು ಸರ್ಕಾರ ಗುರುತಿಸಿ, ಪ್ರಶಸ್ತಿಗೆ ಆಯ್ಕೆ ಮಾಡಿರುವುದು ತುಂಬಾ ಸಂತೋಷ ತಂದಿದೆ. ಬಾಲ್ಯದಿಂದ ನಾನು ಪಟ್ಟ ಶ್ರಮ ಹಾಗೂ ಮಾಡಿದ ಕಲಾ ಸೇವೆ ಸಿಕ್ಕಿದ ಗೌರವ ಇದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT