ಚಾಮರಾಜನಗರ: ಚಾಮರಾಜನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಂಗಳವಾರ ಬಿರುಸಿನ ಮಳೆಯಾಗಿದೆ.
ಚಾಮರಾಜನಗರದಲ್ಲಿ ಮಧ್ಯಾಹ್ನ 3 ಗಂಟೆಗೆ ಆರಂಭಗೊಂಡ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಎಡೆಬಿಡದೆ ಸುರಿಯಿತು. ಚರಂಡಿಗಳು ಉಕ್ಕಿದ್ದರಿಂದ ರಸ್ತೆಯಲ್ಲಿ ನೀರು ಹರಿಯಿತು.
ಚಾಮರಾಜನಗರ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಭಾರಿ ಮಳೆಯಾಗಿದ್ದು, ಬೇಡರಪುರ ವ್ಯಾಪ್ತಿಯಲ್ಲಿ ಚುನಾವಣಾ ಮತ ಎಣಿಕೆ ಮುಕ್ತಾಯದ ಹಂತದಲ್ಲಿ ಮಳೆಯಾಗಿದ್ದರಿಂದ ಭದ್ರತಾ ಸಿಬ್ಬಂದಿ, ಚುನಾವಣಾ ಅಧಿಕಾರಿಗಳು, ಜನರು ಓಡಾಡುವುದಕ್ಕೆ ತೊಂದರೆ ಅನುಭವಿಸಿದರು.
ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 1.22 ಸೆಂ.ಮೀ ಮಳೆಯಾಗಿದೆ.
ಚಾಮರಾಜನಗರದಲ್ಲಿ ಮಂಗಳವಾರ ಮಧ್ಯಾಹ್ನ ಸುರಿದ ಮಳೆಗೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನೀರು ನಿಂತಿತ್ತು