ಸಂತೇಮರಹಳ್ಳಿ: ನಾಣ್ಯಶಾಸ್ತ್ರ ಆಧ್ಯಯನ ಹಾಗೂ ನಾಣ್ಯಗಳ ಸಂಗ್ರಹದಿಂದ ಭಾರತ ದೇಶದ ಇತಿಹಾಸವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ನಿವೃತ್ತ ಇಂಜಿನಿಯರ್ ಹಾಗೂ ಪ್ರಾಚೀನ ಕಾಲದ ನಾಣ್ಯಗಳ ಸಂಗ್ರಹಕಾರ ಎಚ್.ಕೆ. ರಾಮ್ರಾವ್ ಅಭಿಪ್ರಾಯಪಟ್ಟರು.
ಸಮೀಪದ ಕುದೇರು ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಐ.ಕ್ಯೂ.ಎ.ಸಿ ಸಹಯೋಗದೊಂದಿಗೆ ಇತಿಹಾಸ ಹಾಗೂ ಅರ್ಥಸಾಸ್ತ್ರ ವಿಭಾಗಗಳ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ನಾಣ್ಯಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದ ಚರಿತ್ರೆಯಲ್ಲಿ ನಾಣ್ಯಗಳ ಆರಂಭಕ್ಕೂ ಮೊದಲು ಸಾಟಿ ವಿನಿಮಯ ಪದ್ಧತಿ ಇತ್ತು. ದಿನಗಳು ಉರುಳಿದಂತೆ ನಾಣ್ಯಗಳ ಚಲಾವಣೆ ಆರಂಭವಾಯಿತು. ಋಗ್ವೇದ ಕಾಲದಲ್ಲಿ ಹಸುಗಳನ್ನು ಮಾನದಂಡವಾಗಿಟ್ಟುಕೊಂಡು ವ್ಯಾಪಾರ ನಡೆಸಲಾಗುತಿತ್ತು. ನಂತರ ಆರ್ಯರ ಕಾಲದಲ್ಲಿ ನಿಷ್ಕ ಹೆಸರಿನಲ್ಲಿ ನಾಣ್ಯಗಳು ಚಲಾವಣೆಗೆ ಬಂದಿತ್ತು. ಗೌತಮ ಬುದ್ಧನ ಕಾಲ ಕ್ರಿಸ್ತ ಪೂರ್ವದಲ್ಲಿ ನಾಣ್ಯಗಳು ಚಲಾವಣೆಯಲ್ಲಿದ್ದವು. ಅವುಗಳು ಈಗಲೂ ಲಭ್ಯವಿದ್ದು, ಪ್ರದರ್ಶನಕ್ಕೆ ಇಡಲಾಗಿದೆ ಎಂದರು.
ಮೌರ್ಯರು, ಶಾತವಾಹನರು ಸೇರಿದಂತೆ ದೇಶವನ್ನು ಆಳಿದ ರಾಜ ಮಹಾರಾಜರ ಕಾಲದ ನಾಣ್ಯಗಳನ್ನು ಸಂಗ್ರಹಿಸಿಡಲಾಗಿದೆ ಎಂದು ತಿಳಿಸಿದರು.
ನಾಣ್ಯಗಳ ಸಂಗ್ರಹದಿಂದ ದೇಶವನ್ನು ಆಳಿದ ರಾಜರ ಇತಿಹಾಸವನ್ನು ತಿಳಿಯಬಹುದಾಗಿದೆ. ಅದರಲ್ಲೂ ಇತಿಹಾಸ ವಿದ್ಯಾರ್ಥಿಗಳಿಗೆ ನಾಣ್ಯಗಳ ಸಂಗ್ರಹ ಮತ್ತು ಪರಿಚಯದಿಂದ ಸಹಾಯವಾಗುತ್ತದೆ. ಜತೆಗೆ ಅಂದಿನ ಕಾಲದ ರಾಜರ ಕಾಲಘಟ್ಟವನ್ನು ತಿಳಿದು ಅಧ್ಯಯನ ಮಾಡಲು ಸಹಕಾರಿಯಾಗುತ್ತದೆ ಎಂದರು.
ಪ್ರಾಂಶುಪಾಲ ಥಿಯೋಡರ್ ಲೂಥರ್ ಮಾತನಾಡಿ, ನಾಣ್ಯಗಳ ಸಂಗ್ರಹ ಪ್ರದರ್ಶನದಿಂದ ವಿದ್ಯಾರ್ಥಿಗಳಲ್ಲಿ ಇತಿಹಾಸ ಪ್ರಜ್ಞೆ ಬೆಳೆಯಲು ಸಾಧ್ಯವಾಗುತ್ತದೆ. ಜತೆಗೆ ಸ್ಫೂರ್ತಿ ಮತ್ತು ಆಸಕ್ತಿಯಿಂದ ಅಧ್ಯಯನಕ್ಕೆ ಕುತೂಹಲ ಹುಟ್ಟಿಸುತ್ತದೆ ಎಂದು ತಿಳಿಸಿದರು.
ಕ್ರಿಸ್ತ ಪೂರ್ವ 300 ರಿಂದ ಪ್ರಸ್ತುತ 2023ರ ವರೆಗಿನ ನಾಣ್ಯಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಪ್ರಾಧ್ಯಾಪಕರಾದ ಶಶಿಕಲಾ, ವಾಣಿ, ಮಹೇಂದ್ರ, ಮಮತಾ, ಕವಿತಾ, ಮಧುಸೂಧನ್, ಶ್ರೀನಿವಾಸ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.