ಹನೂರು: ಪಟ್ಟಣದ ಹೊರವಲಯದ ಜಮೀನಿಗೆ ನೀರು ಕುಡಿಯಲು ಬಂದು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದ ಎರಡು ಜಿಂಕೆಗಳನ್ನು ಅಗ್ನಿಶಾಮಕ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಮೇಲೆತ್ತಿದ್ದಾರೆ.
ಪಟ್ಟಣದ ಎಲಚಿಕೆರೆ ರಸ್ತೆಯಲ್ಲಿರುವ ಜಮೀನಿನ ಬಾವಿ ಹಾಗೂ ಶನೀಶ್ವರ (ಶನಿಮಹಾತ್ಮ) ದೇವಸ್ಥಾನದ ಸಮೀಪದ ಪಾಳುಬಾವಿಗೆ ಜಿಂಕೆಗಳು ಬಿದ್ದಿದ್ದವು. ಸ್ಥಳೀಯರು ಬುಧವಾರ ಬೆಳಿಗ್ಗೆ ಅಗ್ನಿಶಾಮಕ ಠಾಣೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅವುಗಳನ್ನು ರಕ್ಷಿಸಿದ್ದಾರೆ. ಜನರನ್ನು ಕಂಡು ಗಾಬರಿಗೊಂಡ ಜಿಂಕೆಗಳು ಹಗ್ಗ ಬಿಚ್ಚುತ್ತಿದಂತೆ ಸಮೀಪದ ಅರಣ್ಯ ಪ್ರದೇಶಕ್ಕೆ ಓಡಿಹೋಗಿವೆ.
ಅಗ್ನಿಶಾಮಕ ಠಾಣಾಧಿಕಾರಿ ಶೇಷಾ, ಸಿಬ್ಬಂದಿ ಜಯಪ್ರಕಾಶ್, ಮುನಿಶಾಂತ, ಗಿರೀಶ್, ನಾಗೇಶ್, ಅರಣ್ಯ ಇಲಾಖೆಯ ಶಿವರಾಜು, ಕೃಷ್ಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.