ಕೊಳ್ಳೇಗಾಲ: ತಾಲ್ಲೂಕಿನ ಟಿ.ಸಿ.ಹುಂಡಿ ಗ್ರಾಮದಲ್ಲಿ ಮಹಿಳೆಯೊಬ್ಬರು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾಗಿದ್ದಾರೆ.
ಗ್ರಾಮದ ಕವಿತಾ(37) ಮೃತಪಟ್ಟವರು. ಇವರನ್ನು ಚಾಮರಾಜನಗರ ತಾಲ್ಲೂಕು ಬಿಸಲವಾಡಿ ಗ್ರಾಮದ ಚೇತನ್ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಮದುವೆ ಸಂದರ್ಭದಲ್ಲಿ ಚಿನ್ನ ಸೇರಿ ವರದಕ್ಷಿಣೆ ನೀಡಲಾಗಿತ್ತು.
ಮದುವೆ ನಂತರ ಎರಡು ಲಕ್ಷ ವರದಕ್ಷಿಣೆ ತರಬೇಕೆಂದು ಗಂಡ ಚೇತನ್, ಆತ್ತೆ ಸಿದ್ದರಾಜಮ್ಮ, ಮಾವ ಸೋಮಯ್ಯ, ಮೈದ ಕೃಷ್ಣಮೂರ್ತಿ, ಚೇತನ್ ಚಿಕ್ಕಮ್ಮ ಹಾಗೂ ಆತ್ತೆ ಮಕ್ಕಳಾದ ಭುವನ್, ರಾಘವೇಂದ್ರ ಇವರು ಒಟ್ಟಾಗಿ ಸೇರಿ ಚಿತ್ರೆಹಿಂಸೆ ನೀಡುತ್ತಿದ್ದರು.
ಕವಿತಾ ಮನೆಯಿಂದ ತಪ್ಪಿಸಿಕೊಂಡು ಬಂದು ಸಾಂತ್ವನ ಕೇಂದ್ರಕ್ಕೆ ಬಂದು ದೂರು ನೀಡಿದ್ದರು. ಸಾಂತ್ವನ ಕೇಂದ್ರದವರು ಕವಿತಾಳಿಗೆ ಧೈರ್ಯ ತುಂಬಿ ನಿಮಗೆ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿ ಹೋಗಿದ್ದರು. ಯಾವುದೇ ನ್ಯಾಯ ದೊರಕದ ಕಾರಣ ಬೇಸತ್ತು ಮನೆಯಲ್ಲಿ ಯಾರೂ ಇಲ್ಲದಿರುವಾಗ ಮೇಲ್ಛಾವಣಿಗೆ ಸೀರೆ ಕಟ್ಟಿ ನೇಣು ಹಾಕಿಕೊಂಡಿದ್ದಾರೆ.
ಮೃತಳ ಸಹೋದರ ಚೆಲುವರಾಜು ನಗರ ಪೊಲೀಸ್ ಠಾಣೆಗೆ ದೂರು ನೀಡಿ, ಸಾವಿಗೆ ಕಾರಣರಾದ ಏಳು ಮಂದಿ ವಿರುದ್ಧ ಕಾನೂನುಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು. ಪಿಎಸ್ಐ ಮಹೇಶ್ ತನಿಖೆ ನಡೆಸುತ್ತಿದ್ದಾರೆ.