ಚಾಮರಾಜನಗರ: ‘ಸಂವಿಧಾನದ ಬಗ್ಗೆ ಜನರಿಗೆ, ವಿದ್ಯಾರ್ಥಿಗಳಿಗೆ ತಿಳಿಸುವಾಗ ರಾಗ ದ್ವೇಷ ಇರಬಾರದು. ಸಂವಿಧಾನವನ್ನು ಓದಿ ಎಂದು ಹೇಳುವುದು ಯಾವುದೋ ಸಿದ್ಧಾಂತವನ್ನು ತಿಳಿಸುವ ವಿಧಾನ ಆಗಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಶನಿವಾರ ಹೇಳಿದರು.
ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಪಿಯುಸಿಯ 30 ಸಾವಿರ ವಿದ್ಯಾರ್ಥಿಗಳಿಗೆ, ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರು ಬರೆದಿರುವ ‘ಸಂವಿಧಾನ ಓದು’ ಪುಸ್ತಕ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ದೇಶದ ಸಂವಿಧಾನದಲ್ಲಿ ತುರ್ತುಪರಿಸ್ಥಿತಿ ಹೇರಿಕೆಯು ಕರಾಳ ಅಧ್ಯಾಯ. ನಾಗಮೋಹನ್ ದಾಸ್ ಅವರು ‘ಸಂವಿಧಾನ ಓದು’ ಕೃತಿಯಲ್ಲಿ ಇದನ್ನು ಯಾಕೆ ಸೇರಿಸಿಲ್ಲ ಎಂಬುದು ಗೊತ್ತಿಲ್ಲ. ಆದರೆ, ಅವರು ಇದನ್ನು ಸೇರಿಸಬೇಕಾಗಿತ್ತು’ ಎಂದರು.
‘ರಾತ್ರಿ ಮೂರು ಗಂಟೆ ರಾಷ್ಟ್ರಪತಿ ಅವರನ್ನು ನಿದ್ದೆಯಿಂದ ಎಬ್ಬಿಸಿ ತುರ್ತು ಪರಿಸ್ಥಿತಿ ಘೋಷಣೆಗೆ ಸಹಿ ಹಾಕಿಸಲಾಗಿತ್ತು. ಸರ್ಕಾರದ ವಿರುದ್ಧ ಮಾತನಾಡಿದವರೆನ್ನೆಲ್ಲ ಬಂಧಿಸಿ ಚಿತ್ರಹಿಂಸೆ ನೀಡಲಾಗಿತ್ತು. ಲೋಕಸಭೆಯನ್ನು ದುರುಪಯೋಗ ಪಡಿಸಿಕೊಂಡಿದ್ದರು. ನ್ಯಾಯಾಂಗವನ್ನೂ ಹಿಡಿತದಲ್ಲಿಟ್ಟುಕೊಂಡಿದ್ದರು. ಮಾಧ್ಯಮಗಳ ಮೇಲೆಯೂ ನಿಯಂತ್ರಣ ಹೇರಲಾಗಿತ್ತು. ಇದೊಂದು ಕರಾಳ ಅಧ್ಯಾಯ. ಮೂರು ಬಾರಿ ‘ಸಂವಿಧಾನ ಓದು’ ಪುಸ್ತಕವನ್ನು ಓದಿದ್ದೇನೆ. ಆದರೆ, ನನ್ನ ಆತ್ಮೀಯ ಗೆಳೆಯರಾದ ನಾಗಮೋಹನ್ದಾಸ್ ಅವರು ಇದರ ಬಗ್ಗೆ ಪುಸ್ತಕದಲ್ಲಿ ಸೇರಿಸಿಲ್ಲ. ಯಾಕೆ ಎಂಬುದು ಎಂಬುದು ಗೊತ್ತಿಲ್ಲ. ಇದು ಅತ್ಯಂತ ಅಗತ್ಯವಾಗಿದ್ದ ಅಧ್ಯಾಯವಾಗಿತ್ತು. ಯಾಕೆಂದರೆ ತುರ್ತುಪರಿಸ್ಥಿತಿಯಂತಹ ಸ್ಥಿತಿ ಈ ದೇಶದಲ್ಲಿ ಇನ್ನೊಮ್ಮೆ ನಿರ್ಮಾಣವಾಗಬಾರದು’ ಎಂದರು.
‘ಅದರ ಬದಲಿಗೆ, ಅಲ್ಲೇನೋ ನಡಿಯುತ್ತಿದೆ. ಇಲ್ಲೇನೋ ಆಗುತ್ತಿದೆ ಎಂದು ಹೇಳುವುದು, ಯಾರೋ ಒಬ್ಬರು ಸಂವಿಧಾನದ ವಿರುದ್ಧ ಮಾತನಾಡಿದ್ದನ್ನು ಪ್ರಸ್ತಾಪಿಸಿ, ಅದನ್ನು ಸರ್ಕಾರದ ವಿರುದ್ಧವೇ ಹಾಕುವುದು ಅಷ್ಟು ಸರಿ ಹೋಗಲಿಕ್ಕಿಲ್ಲ. ಸಂವಿಧಾನ ಎನ್ನುವುದು ನಮ್ಮ ಜೀವನದ ಶ್ರದ್ಧೆಯ ಗ್ರಂಥ. ನಮಗೆ ಜೀವನದಲ್ಲಿ ಏನಾದರೂ ಅವಕಾಶ ಸಿಕ್ಕಿದ್ದರೆ ಅದಕ್ಕೆ ಸಂವಿಧಾನ ಕಾರಣ’ ಎಂದರು.
‘ಮೋದಿ ಸರ್ಕಾರ ಬಂದ ಮೇಲೆ ಪ್ರತಿ ವರ್ಷ ನವೆಂಬರ್ 26ರಂದು ಸಂವಿಧಾನ ದಿನ ಆಚರಿಸಲಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ಆ ದಿನ ಸಂವಿಧಾನದ ಪೀಠಿಕೆಯನ್ನು ಓದಿಸಲಾಗುತ್ತದೆ. ಪ್ರತಿ ಶಾಲೆಯಲ್ಲಿ ಪ್ರತಿ ಮಗು ಓದುವಂತೆ ಮಾಡಲಾಗಿದೆ’ ಎಂದು ಸುರೇಶ್ ಕುಮಾರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.