ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕಾಯತ್‌ ಮೇಲಿನ ಹಲ್ಲೆ ಪ್ರಕರಣ: ಒಂದಾಗಲಿವೆಯೇ ರೈತ ಸಂಘದ ಬಣಗಳು?

ಜಿಲ್ಲೆಯಲ್ಲಿ ಒಟ್ಟುಗೂಡಲು ಮುಖಂಡರ ಇಂಗಿತ
Last Updated 2 ಜೂನ್ 2022, 4:27 IST
ಅಕ್ಷರ ಗಾತ್ರ

ಚಾಮರಾಜನಗರ: ಬೆಂಗಳೂರಿನಲ್ಲಿ ರೈತ ನಾಯಕ ರಾಕೇಶ್‌ ಟಿಕಾಯತ್‌ ಅವರ ಮೇಲೆ ನಡೆದ ಹಲ್ಲೆ ನಡೆದ ನಂತರ ಜಿಲ್ಲೆಯಲ್ಲಿ ರೈತ ಚಳವಳಿ ಬಲಗೊಳ್ಳಬೇಕು ಎಂಬ ಕೂಗು ಎದ್ದಿದ್ದು,ರೈತ ಸಂಘದ ಎರಡು ಬಣಗಳು ಒಂದಾಗುವ ಬಗ್ಗೆ ಚರ್ಚೆ ಆರಂಭವಾಗಿದೆ.

ಜಿಲ್ಲೆಯಲ್ಲಿ ರೈತ ಸಂಘಟನೆಯನ್ನು ಗಟ್ಟಿಗೊಳಿಸುವ ಉದ್ದೇಶದಿಂದಒಟ್ಟುಗೂಡುವ ಇಂಗಿತವನ್ನುರೈತ ಸಂಘದ ಎರಡೂ ಬಣಗಳ ಮುಖಂಡರು ವ್ಯಕ್ತಪಡಿಸಿದ್ದಾರೆ.

ಟಿಕಾಯತ್‌ ಮೇಲೆ ಹಲ್ಲೆ ಮಾಡಿರುವ ಘಟನೆಯನ್ನು ಖಂಡಿಸಿ ಎರಡೂ ಬಣಗಳು ನಗರದಲ್ಲಿ ಮಂಗಳವಾರ ಒಟ್ಟಾಗಿ ಪ‍್ರತಿಭಟನೆ ನಡೆಸಿದ್ದವು.

ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅವರು, ಎರಡೂ ಸಂಘಟನೆಗಳು ಒಟ್ಟಾಗುವ ಪ್ರಸ್ತಾಪವನ್ನು ಸಾರ್ವಜನಿಕವಾಗಿಯೇ ಮುಂದಿಟ್ಟಿದ್ದಾರೆ. ಅವರ ಬಣದಿಂದ ಇದಕ್ಕೆ ಬೆಂಬಲ ವ್ಯಕ್ತವಾಗಿದೆ. ಬಡಗಲಪುರ ನಾಗೇಂದ್ರ ಅವರ ನೇತೃತ್ವದ ಇನ್ನೊಂದು ರೈತ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಕೂಡ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಗೊತ್ತಾಗಿದೆ.

ಮೊದಲು ಜಿಲ್ಲಾ ಹಂತದಲ್ಲಿ ಒಂದುಗೂಡಿ ನಂತರ ರಾಜ್ಯ ಮಟ್ಟದಲ್ಲಿ ಇದೇ ಪ್ರಯತ್ನ ಮಾಡುವ ಯೋಚನೆಯನ್ನು ಮುಖಂಡರು ಹಾಕಿಕೊಂಡಿದ್ದಾರೆ.

‘ರಾಕೇಶ್‌ ಟಿಕಾಯತ್‌ ಅವರು ರಾಷ್ಟ್ರಮಟ್ಟದ ರೈತ ನಾಯಕ. ತುಂಬಾ ಪ್ರಭಾವಿ. ಅಂತಹವರ ಮೇಲೆ ಹಲ್ಲೆ ನಡೆಯುತ್ತದೆ ಎಂದರೆ ಪರಿಸ್ಥಿತಿ ಎಲ್ಲಿಗೆ ಬಂತು? ರೈತ ಸಂಘ ದುರ್ಬಲವಾಗಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ನಾವು ಪ್ರಬಲವಾಗಬೇಕು. ಅದಕ್ಕೆ ಸಂಘಟನೆಗೆ ಇನ್ನಷ್ಟು ಶಕ್ತಿ ಬೇಕು. ಬೇರೆ ಬೇರೆ ಸಂಘಗಳಿದ್ದರೆ, ಹೋರಾಟದ ಧ್ವನಿ ಕ್ಷೀಣವಾಗುತ್ತದೆ. ರೈತ ಸಂಘಗಳು ಒಂದಾದರೆ ನಮ್ಮ ಚಳವಳಿ ಗಟ್ಟಿಯಾಗುತ್ತದೆ’ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡೂ ಸಂಘಗಳ ಜಿಲ್ಲಾ ಮಟ್ಟದ ಮುಖಂಡರೊಂದಿಗೆ ಮಾತನಾಡಿದ್ದೇವೆ. ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಆಯಾ ಸಂಘದ ಮುಖಂಡರು ಅವರ ಪದಾಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಆ ಬಳಿಕ ಈ ಬಗ್ಗೆ ನಿರ್ಧಾರ ಹೊರಬೀಳಲಿದೆ. ಆರಂಭದಲ್ಲಿ ಜಿಲ್ಲಾ ಮಟ್ಟದಲ್ಲಿ ಚಳವಳಿ ಬಲಗೊಳಿಸುವುದು ನಮ್ಮ ಉದ್ದೇಶ. ನಂತರ ರಾಜ್ಯ ಮಟ್ಟದ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದೇವೆ. ನಮ್ಮ ಹೊಸ ಅಧ್ಯಕ್ಷ ಬಸವರಾಜಪ್ಪ ಅವರು ಕೂಡ ಇದೇ ರೀತಿಯ ಮಾತನಾಡಿದ್ದಾರೆ. ಒಂದಾಗುವುದಿದ್ದರೆ ಅಧ್ಯಕ್ಷ ಸ್ಥಾನ ತ್ಯಜಿಸಲು ಸಿದ್ಧ ಎಂದು ಹೇಳಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ರೈತ ಸಂಘದ ಇನ್ನೊಂದು ಬಣದ ಜಿಲ್ಲಾ ಘಟಕದ ಅಧ್ಯಕ್ಷ ಹೆಬ್ಬಸೂರು ಬಸವಣ್ಣ ಅವರು ಪ್ರತಿಕ್ರಿಯಿಸಿ, ‘ಪ್ರಸ್ತಾವದ ಬಗ್ಗೆ ಚರ್ಚೆ ನಡೆಯುತ್ತಿರುವುದು ನಿಜ. ಪ್ರಭಾವಿ ನಾಯಕರಾದ ಟಿಕಾಯತ್‌ ಮೇಲೆಯೇ ಹಲ್ಲೆ ನಡೆದಿದೆ ಎಂದರೆ ನಮ್ಮನ್ನು ಇವರು ಸುಮ್ಮನೆ ಬಿಡುತ್ತಾರೆಯೇ? ಸಂಘ ಇನ್ನಷ್ಟು ಪ್ರಬಲವಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸಂಘಟನೆಗಳು ಒಟ್ಟಾದರೆ ಚಳವಳಿ ಬಲಗೊಳ್ಳಲಿದೆ. ನಮ್ಮ ಜಿಲ್ಲೆಯಲ್ಲಿ ಅಂತಹ ಪ್ರಯತ್ನ ನಡೆಯಲಿದೆ’ ಎಂದು ಹೇಳಿದರು.

ಸಂಘಟನೆಯಲ್ಲಿ ಬಿರುಕು ಮೂಡಿದ್ದು ಏಕೆ?

ರಾಜ್ಯದಲ್ಲಿ ರೈತ ಸಂಘದ ಮೂರು ಬಣಗಳಿವೆ. ಸಾಮೂಹಿಕ ನಾಯಕತ್ವದ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ (ಬಡಗಲಪುರ ನಾಗೇಂದ್ರ ಬಣ), ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಬಸವರಾಜಪ್ಪ ಬಣ– ಕೋಡಿಹಳ್ಳಿ ಚಂದ್ರಶೇಖರ್‌ ಅವರನ್ನು ಪದಚ್ಯುತಿಗೊಳಿಸಲಾಗಿದ್ದು, ಬಸವರಾಜಪ್ಪ ಹೊಸ ಅಧ್ಯಕ್ಷ ಎಂದು ಅದರ ಮುಖಂಡರು ಹೇಳುತ್ತಿದ್ದಾರೆ). ಜಿಲ್ಲೆಯಲ್ಲಿ ಎರಡನೇ ಮತ್ತು ಮೂರನೇ ಬಣ ಹೆಚ್ಚು ಸಕ್ರಿಯವಾಗಿವೆ. ಕೃಷಿ ಕಾನೂನುಗಳ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಈ ಎರಡು ಬಣಗಳು ಒಟ್ಟಾಗಿ ಹೋರಾಟ ಮಾಡಿದ್ದು ಬಿಟ್ಟರೆ, ಉಳಿದ ಸಂದರ್ಭಗಳಲ್ಲಿ ಪ್ರತ್ಯೇಕವಾಗಿಯೇ ಹೋರಾಟ ನಡೆಸುತ್ತಾ ಬಂದಿವೆ. ಕಳೆದ ವಾರ ಬಡಗಲಪುರ ನಾಗೇಂದ್ರ ಅವರ ಬಣವು ಕೋಡಿಹಳ್ಳಿ ಚಂದ್ರಶೇಖರ್‌ ಅವರ ವಿರುದ್ಧ ಪ್ರತಿಭಟನೆಯನ್ನೂ ನಡೆಸಿತ್ತು.

ಜಿಲ್ಲೆಯಲ್ಲಿ ರೈತ ಚಳವಳಿ ಪ್ರಬಲವಾಗಿತ್ತು. 2013ರ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ರೈತ ನಾಯಕ ಕೆ.ಎಸ್‌.ಪುಟ್ಟಣ್ಣಯ್ಯ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ರಮ್ಯಾ ಅವರನ್ನು ಬೆಂಬಲಿಸುವುದಾಗಿ ಘೋಷಣೆ ಮಾಡಿದಾಗ ಕೆಲವು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರು. ಆ ಬಳಿಕ ಸಂಘಟನೆಯಲ್ಲಿ ಬಿರುಕು ಮೂಡಿತ್ತು.

‘ಒಂದಾಗುವುದಕ್ಕೆ ಸಹಮತ’

ಕಬ್ಬುಬೆಳೆಗಾರರ ಸಂಘದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಪ್ರತಿಕ್ರಿಯಿಸಿ, ‘ನಡೆಯುತ್ತಿರುವ ಚರ್ಚೆಯ ಬಗ್ಗೆ ನನಗೆ ಮಾಹಿತಿ ಗೊತ್ತಿಲ್ಲ. ಆದರೆ, ಸಂಘಟನೆಗಳು ಒಂದಾದರೆ ಸಂತೋಷ. ಇದಕ್ಕೆ ಸಂಪೂರ್ಣ ಸಹಮತ ಇದೆ. ರೈತ ಮುಖಂಡರು ಒಣಪ್ರತಿಷ್ಠೆ, ಸ್ಥಾನಮಾನದ ಆಕಾಂಕ್ಷೆ ಬಿಟ್ಟು, ರೈತರ ಹಕ್ಕುಗಳು, ಅವರ ಸಮಸ್ಯೆಗಳಿಗೆ ಹೋರಾಟ ಮಾಡಬೇಕು. ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಮಾನಕ್ಕಿಂತ ಎಲ್ಲ ಬಣಗಳನ್ನು ಸೇರಿಸಿ ಸಂಚಾಲನಾ ಸಮಿತಿಯನ್ನು ರಚಿಸುವುದು ಹೆಚ್ಚು ಸೂಕ್ತ’ ಎಂದು ಹೇಳಿದರು.

* ಶನಿವಾರ ಸಂಘದ ಸಭೆ ಕರೆಯಲಾಗಿದ್ದು, ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಅಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ.

- ಹೊನ್ನೂರು ಪ್ರಕಾಶ್‌, ರೈತ ಸಂಘ, ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ

* ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹಿಸಲು ನಿರ್ಧರಿಸಲಾಗಿದೆ. ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಈ ಬಗ್ಗೆ ಚರ್ಚಿಸಲಾಗುವುದು.

-ಹೆಬ್ಬಸೂರು ಬಸವಣ್ಝ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT