ಗುಂಡ್ಲುಪೇಟೆ: ಪಟ್ಟಣದಲ್ಲಿ ಮೀನು ಸೇರಿದಂತೆ ಇತರೆ ಮಾಂಸ ಮಾರಾಟಕ್ಕೆ ಅನುಕೂಲವಾಗುವಂತೆ ನಿರ್ಮಿಸಲಾಗಿರುವ ಕಟ್ಟಡ ಪಾಳು ಬಿದ್ದಿದ್ದು, ಆವರಣ ಕಸ ಹಾಕುವ ಸ್ಥಳವಾಗಿ ಬದಲಾಗಿದೆ. ಅನೈರ್ಮಲ್ಯ ತಾಂಡವವಾಡುತ್ತಿದೆ.
ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ರಸ್ತೆಗೆ ಹೊಂದಿಕೊಂಡಂತೆ 7ನೇ ವಾರ್ಡ್ನಲ್ಲಿ, ಎಂಟು ವರ್ಷಗಳ ಹಿಂದೆ ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಅವರ ಅವಧಿಯಲ್ಲಿ ಮೀನು ಮಾರುಕಟ್ಟೆ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಆದರೆ, ಇನ್ನೂ ಅದು ಉದ್ಘಾಟನೆ ಭಾಗ್ಯ ಕಂಡಿಲ್ಲ.
ಕಟ್ಗಟಡವು 30ಕ್ಕೂ ಅಧಿಕ ಮಳಿಗೆಗಳನ್ನು ಹೊಂದಿದೆ. ಆದರೆ, ಯಾವುದಕ್ಕೂ ಪ್ರಯೋಜನ ಇಲ್ಲದಂತಾಗಿದೆ.
‘ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿ ನಡೆಯಿಂದಾಗಿ ನಿರುಪಯುಕ್ತವಾಗಿ ಬಿದ್ದಿದೆ’ ಎಂಬುದು ಸಾರ್ವಜನಿಕರ ಆರೋಪ.
ವಾರ್ಡ್ ನಿವಾಸಿಗಳು ಹಾಗೂ ಸುತ್ತಮುತ್ತಲ ಅಂಗಡಿ ಮಾಲೀಕರು ಮಾರುಕಟ್ಟೆ ಆಸುಪಾಸಿನಲ್ಲಿ ಕಸ-ಕಡ್ಡಿ ಮತ್ತು ತ್ಯಾಜ್ಯ ವಸ್ತುಗಳನ್ನು ತಂದು ಸುರಿಯುತ್ತಿದ್ದಾರೆ. ಇದರಿಂದ ಕಟ್ಟಡದ ಆವರಣ ಗಬ್ಬೆದ್ದು ನಾರುತ್ತಿದ್ದು, ಮೂಗುಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ತುಂಬಿದ ಮ್ಯಾನ್ ಹೋಲ್: ಮಾರುಕಟ್ಟೆ ಎದುರಿನ ಮ್ಯಾನ್ ಹೋಲ್ ತುಂಬಿ ಕೊಳಚೆ ನೀರು ಹರಿಯುತ್ತಿದೆ. ಇದರಿಂದ ಇಡೀ ಪ್ರದೇಶವೆಲ್ಲ ದುರ್ವಾಸನೆ ಬೀರುತ್ತಿದ್ದು, ಪಾದಾಚಾರಿಗಳು ಹಾಗು ದ್ವಿಚಕ್ರ ವಾಹನ ಸವಾರರು ವಾಸನೆ ಕುಡಿಯುತ್ತಾ ಸಾಗಬೇಕಾಗಿದೆ.
ಸಾಂಕ್ರಾಮಿಕ ರೋಗದ ಭೀತಿ: 7ನೇ ವಾರ್ಡ್ ಪ್ರಮುಖ ಜಾಗಗಳಲ್ಲಿ ಕಸದ ರಾಶಿ ಬಿದ್ದಿರುವ ಕಾರಣ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ವಾರ್ಡ್ ಸದಸ್ಯರು. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
8 ವರ್ಷಗಳ ಹಿಂದೆ ನಿರ್ಮಾಣ 32 ಮಳಿಗೆಗಳಿರುವ ಕಟ್ಟಡ ಅಂಗಡಿಗೆ ಬಾರದ ವ್ಯಾಪಾರಿಗಳು
ಕಟ್ಟಡ ಸುತ್ತಲೂ ಸ್ವಚ್ಚಗೊಳಿಸಲಾಗುವುದು. ಯಾರೂ ಮಾರುಕಟ್ಟೆಯಲ್ಲಿ ಅಂಗಡಿ ನಡೆಸಲು ಮುಂದಾಗುತ್ತಿಲ್ಲ. ಕಸ ಸುರಿಯದಂತೆ ಎಚ್ಚರಿಕೆ ನೀಡಲಾಗುತ್ತದೆ