ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಜಮ್ಮ ಜೋಗತಿ ಅವರು, ‘ಸಾಮಾನ್ಯವಾಗಿ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವವರನ್ನು ಘೋಷಿಸಿವುದು ಹಾಗೂ ಪ್ರದಾನ ಸಮಾರಂಭಗಳನ್ನು ಬೆಂಗಳೂರಿನಲ್ಲೇ ನಡೆಸಲಾಗುತ್ತದೆ. ನಾನು ಬಳ್ಳಾರಿಯವಳಾಗಿರುವುದರಿಂದ ಈ ವರ್ಷ ಅಲ್ಲಿಯೇ ಕಾರ್ಯಕ್ರಮ ಮಾಡಬೇಕೆಂದಿದ್ದೆ. ಆದರೆ, ಜಿಲ್ಲೆಯವರಾದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ ಅವರು ಹಲವು ಜನಪದ ಕಲೆಗಳ ತವರು ಆಗಿರುವ ಚಾಮರಾಜನಗರದಲ್ಲಿ ಕಾರ್ಯಕ್ರಮ ಮಾಡಬೇಕು ಎಂದು ಮನವಿ ಮಾಡಿದರು. ಇತರ ಸದಸ್ಯರೂ ಅದನ್ನು ಬೆಂಬಲಿಸಿದರು. ಅಂತಿಮವಾಗಿ ಇಲ್ಲಿಯೇ ನಡೆಸಲು ತೀರ್ಮಾನಿಸಲಾಯಿತು’ ಎಂದು ಹೇಳಿದರು.