ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ |ಧ್ರುವನಾರಾಯಣ ಜನಾನುರಾಗಿ, ಆದರ್ಶ ರಾಜಕಾರಣಿ: ಸಿ.ಎಂ ಸಿದ್ದರಾಮಯ್ಯ

ಹೆಗ್ಗವಾಡಿಯಲ್ಲಿ ಮಾಜಿ ಸಂಸದರ ಮೊದಲ ಪುಣ್ಯಸ್ಮರಣೆ, ಸಮಾಧಿಗೆ ಪುಷ್ಪನಮನ
Published 13 ಮಾರ್ಚ್ 2024, 6:38 IST
Last Updated 13 ಮಾರ್ಚ್ 2024, 6:38 IST
ಅಕ್ಷರ ಗಾತ್ರ

ಚಾಮರಾಜನಗರ: ‘ಜನಪ್ರತಿನಿಧಿಯಾದವರಲ್ಲಿ ಇರಬೇಕಾಗಿದ್ದ ಎಲ್ಲ ಗುಣಗಳು ಧ್ರುವನಾರಾಯಣ ಅವರಲ್ಲಿದ್ದವು. ಅಜಾತಶತ್ರುವಾಗಿದ್ದ ಅವರು, ಆದರ್ಶ ರಾಜಕಾರಣಿ ಎಂದರೆ ಅತಿಶಯೋಕ್ತಿಯಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಬಣ್ಣಿಸಿದರು. 

ತಾಲ್ಲೂಕಿನ ಹೆಗ್ಗವಾಡಿಯಲ್ಲಿ ನಡೆದ ಮಾಜಿ ಸಂಸದ ದಿವಂಗತ ಆರ್.ಧ್ರುವನಾರಾಯಣ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನಪ್ರತಿನಿಧಿಯಾಗಿರುವವರು ಜನಪರ, ಅಭಿವೃದ್ಧಿ ಪರವಾಗಿರಬೇಕು. ಜನರನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ಧ್ರುವನಾರಾಯಣ ಅವರಿಗೆ ಎಲ್ಲ ಗುಣಗಳಿದ್ದವು. ಸಜ್ಜನಿಕ ಹೊಂದಿದ್ದ ವ್ಯಕ್ತಿ. ಅವರು ಜನರನ್ನು ಹಚ್ಚಿಕೊಳ್ಳದೇ ಇದ್ದ ದಿನವೇ ಇರಲಿಲ್ಲ. ಎರಡು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿ ಅವರನ್ನು ಹತ್ತಿರದಿಂದ ನೋಡಿದ್ದೇನೆ’ ಎಂದರು.

‘ಧ್ರುವನಾರಾಯಣ ಅವರು ಬದುಕಿದ್ದಾಗಲೂ ಜನಪ್ರಿಯರಾಗಿದ್ದರು. ಅಗಲಿದ ಮೇಲೂ ಜನಪ್ರಿಯರಾಗಿದ್ದಾರೆ. ಸಾಮಾನ್ಯವಾಗಿ ಜನರು ಕಾಲವಾದ ಮೇಲೆ ಜನಪ್ರಿಯರಾಗುವುದು ಕಡಿಮೆ. ಧ್ರುವನಾರಾಯಣ ಅವರು ಎಷ್ಟು ಜನಾನುರಾಗಿದ್ದರು ಎಂದರೆ, ಜಾತಿ ಧರ್ಮ ಎನ್ನದೆ ಎಲ್ಲ ಜನರನ್ನೂ ಪ್ರೀತಿಸುತ್ತಿದ್ದರು. ಸಂಸದನಾಗಿದ್ದುಕೊಂಡು ಶಾಸಕರಿಗಿಂತಲೂ ಹೆಚ್ಚು ಕ್ಷೇತ್ರ ಸುತ್ತಾಡುವುದು, ಜನಸಂಪರ್ಕ ಮಾಡುವುದು, ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದರು’ ಎಂದು ಹೇಳಿದರು.

‘ಅಭಿವೃದ್ಧಿಯ ಚಿಂತನೆಯನ್ನು ಅವರು ಹೊಂದಿದ್ದರು. ಹಿಂದುಳಿದ ಜಿಲ್ಲೆಯಾಗಿದ್ದ ಚಾಮರಾಜನಗರದ ಜಿಲ್ಲೆಯಲ್ಲಿ ರಾಜ್ಯ, ಕೇಂದ್ರ ಸರ್ಕಾರಗಳಿಂದ ಅಭಿವೃದ್ಧಿ ಕೆಲಸ ಮಾಡಿಸಿದ್ದರು’ ಎಂದು ತಿಳಿಸಿದರು.

‘ಕಾಂಗ್ರೆಸ್ ಪಕ್ಷಕ್ಕೆ ಆಸ್ತಿಯಾಗಿದ್ದರು. ಕಾರ್ಯಾಧ್ಯಕ್ಷರಾಗಿ ಮೈಸೂರು ವಿಭಾಗದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ, ಕಾರ್ಯಕರ್ತರ ಸಂಪರ್ಕ ಮಾಡಿ ಪಕ್ಷ ಸಂಘಟಿಸಿದ್ದರು. ಅವರ ಅಗಲಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ; ರಾಜ್ಯಕ್ಕೇ ನಷ್ಟವಾಗಿದೆ’ ಎಂದು ಹೇಳಿದರು.

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ‘ಧ್ರುವನಾರಾಯಣ ನಿಷ್ಕಳಂಕ ರಾಜಕಾರಣಿ. ಹಗಲು ರಾತ್ರಿ ಎನ್ನದೆ ಕ್ಷೇತ್ರದ ಜನರ ಜೊತೆ ನಿರಂತರ ಸಂಪರ್ಕ ಹೊಂದಿದ್ದರು. ಎಲ್ಲ ಪಕ್ಷಗಳ, ಮುಖಂಡರ ಜೊತೆ ಸ್ನೇಹ ಸಂಬಂಧ ಹೊಂದಿದ್ದರು. ಅದಕ್ಕೆ ಅವರು ಅಜಾತ ಶತ್ರುವಾಗಿದ್ದರು’ ಎಂದರು.

‘ಯುವ ಪೀಳಿಗೆಗೆ ಅವರು ಮಾದರಿ ರಾಜಕಾರಣಿ. ರಾಜಕಾರಣಿಗಳು ಜನ ಸಂಪರ್ಕ, ಸಂಯಮದ ನಡೆ, ಶಾಂತ ಚಿತ್ತದ ಮನೋಭವನೆ ಹೊಂದಿರಬೇಕು ಎಂಬುದನ್ನು ತೋರಿಸಿದ್ದರು. ಅವರ ನಡೆ ಸದಾ ನಮ್ಮ ನೆನೆಪಿನಲ್ಲಿ ಇರುತ್ತದೆ’ ಎಂದರು.  

ತಂದೆಯ ಹಾದಿಯಲ್ಲಿ ನಡೆಯುವೆ: ಧ್ರುವನಾರಾಯಣ ಮಗ, ಶಾಸಕ ದರ್ಶನ್ ಮಾತನಾಡಿ, ‘ನಮ್ಮ ಮನೆ ದಿನದ 24 ಗಂಟೆ ತೆರೆದಿರುತ್ತದೆ. ಯಾರೂ ಬೇಕಾದರೂ ಬಂದು ಸಮಸ್ಯೆ ಹೇಳಿಕೊಳ್ಳಬಹುದು. ನಾನು ತಂದೆಯವರ ಹಾದಿಯಲ್ಲೇ ನಡೆಯುತ್ತೇನೆ. ಯಾರೂ ಆತಂಕ ಪಡಬೇಕಾಗಿಲ್ಲ. ನಿಮ್ಮೆಲ್ಲರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆ’ ಎಂದರು.

ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿದರು.

ಸಮಾಧಿಗೆ ಪುಷ್ಪನಮನ: ಇದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಹಾಗೂ ಶಾಸಕರು, ಧ್ರುವನಾರಾಯಣ ಅವರ ಸಮಾಧಿಗೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಎಚ್‌.ಎಂ.ಗಣೇಶ್ ಪ್ರಸಾದ್, ಅನಿಲ್ ಚಿಕ್ಕಮಾದು, ಎಂ.ಆರ್.ಮಂಜುನಾಥ್, ವಿಧಾನಪರಿಷತ್‌ ಸದಸ್ಯರಾದ ಡಾ.ತಿಮ್ಮಯ್ಯ, ಮರಿತಿಬ್ಬೇಗೌಡ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ಮುಖಂಡರಾದ ಜಿ.ಎನ್.ನಂಜುಂಡಸ್ವಾಮಿ, ಎಸ್.ಜಯಣ್ಣ, ಡಾ.ಯತೀಂದ್ರ ಸಿದ್ದರಾಮಯ್ಯ, ಬಿ.ಸೋಮಶೇಖರ್, ಎಂ.ಕೆ.ಸೋಮಶೇಖರ್, ಸಿದ್ದರಾಜು, ಕಾಗಲವಾಡಿ ಶಿವಣ್ಣ, ಹಂಗಳ ನಂಜಪ್ಪ,, ನಂಜುಂಡಪ್ರಸಾದ್, ನಂಜುಂಡಸ್ವಾಮಿ, ಧ್ರುವನಾರಾಯಣ ಅವರ ಪುತ್ರ ಧೀರನ್, ಕುಟುಂಬಸ್ಥರು ಸೇರಿದಂತೆ ಕಾಂಗ್ರೆಸ್‌ನ ಹಲವು ಮುಖಂಡರು ಪಾಲ್ಗೊಂಡಿದ್ದರು.

ಚಾಮರಾಜನಗರ ತಾಲ್ಲೂಕಿನ ಹೆಗ್ಗವಾಡಿಯಲ್ಲಿ ನಡೆದ ಆರ್‌.ಧ್ರುವನಾರಾಯಣ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರ ಅಭಿಮಾನಿಗಳು ಕಾಂಗ್ರೆಸ್‌ ಕಾರ್ಯಕರ್ತರು
ಚಾಮರಾಜನಗರ ತಾಲ್ಲೂಕಿನ ಹೆಗ್ಗವಾಡಿಯಲ್ಲಿ ನಡೆದ ಆರ್‌.ಧ್ರುವನಾರಾಯಣ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರ ಅಭಿಮಾನಿಗಳು ಕಾಂಗ್ರೆಸ್‌ ಕಾರ್ಯಕರ್ತರು

‘ದರ್ಶನ್‌ಗೆ ಸಹಕಾರ ಬೆಂಬಲ’

‘ರಾಜಕಾರಣದಲ್ಲಿ ಆದರ್ಶಗಳು ರಾಜಕೀಯ ನಿಲುವು ಸೈದ್ಧಾಂತಿಕ ಬದ್ಧತೆ ಬಹಳ ಮುಖ್ಯ. ಧ್ರುವನಾರಾಯಣ ಅವರಿಗೆ ರಾಜಕೀಯ ಸೈದ್ಧಾಂತಿಕ ನಿಲುವು ಸ್ಪಷ್ಟವಾಗಿತ್ತು. ಬಡವರು ದಲಿತರು ಹಿಂದುಳಿದವರು ಅಲ್ಪ ಸಂಖ್ಯಾತರ ಬಗ್ಗೆ ಕಳಕಳಿ ಇತ್ತು’ ಎಂದು ಸಿದ್ದರಾಮಯ್ಯ ಹೇಳಿದರು.

‘ಅಂಬೇಡ್ಕರ್ ಅವರ ಸಂವಿಧಾನದ ಬಗ್ಗೆ ಧ್ರುವನಾರಾಯಣ ಅಪಾರವಾದ ನಂಬಿಕೆ ಗೌರವ ಹೊಂದಿದ್ದರು. ಈಗ ಸಂವಿಧಾನವನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿವೆ. ಸಂವಿಧಾನ ಉಳಿದರೆ ಮಾತ್ರ ನಾವೂ ನೀವೂ ಉಳಿಯುತ್ತೇವೆ’ ಎಂದು ಎಚ್ಚರಿಸಿದರು.

‘ಧ್ರುವನಾರಾಯಣಗೆ ಉತ್ತಮ ರಾಜಕೀಯ ಭವಿಷ್ಯ ಇತ್ತು. ಸಂಸತ್ತಿನಲ್ಲಿ ಹೆಚ್ಚು ಪ್ರಶ್ನೆಗಳನ್ನು ಕೇಳಿ ದೇಶದಲ್ಲೇ ನಂಬರ್ ಸಂಸದ ಎಂಬ ಕೀರ್ತಿ ಪಡೆದಿದ್ದರು. ಅವರು ಇದ್ದಿದ್ದರೆ ವಿಧಾನಸಭೆಗೋ ಲೋಕಸಭೆಗೋ ಆಯ್ಕೆಯಾಗುತ್ತಿದ್ದರು’ ಎಂದು ಮುಖ್ಯಮಂತ್ರಿಯವರು ಹೇಳಿದರು.

‘ಧ್ರುವನಾರಾಯಣ ಜಾಗವನ್ನು ಅವರ ಮಗ ದರ್ಶನ್ ತುಂಬುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಎಲ್ಲ ಸಹಕಾರ ಬೆಂಬಲ ಕೊಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT