ಕೊಳ್ಳೇಗಾಲ: ಅರಿವು, ಅಕ್ಷರ ಆರೋಗ್ಯ ದಾಸೋಹ ಆಚರಿಸಿಕೊಂಡು ಬಂದವರು ರಾಜೇಂದ್ರ ಸ್ವಾಮೀಜಿ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಡಿ.ಎಸ್. ಸದಾಶಿವಮೂರ್ತಿ ಹೇಳಿದರು.
ನಗರದ ಜೆಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ರಾಜೇಂದ್ರ ಸ್ವಾಮೀಜಿಯವರ 108ನೇ ಜಯಂತಿ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶೂನ್ಯದಿಂದ ಸರ್ವವನ್ನೂ ಕಟ್ಟಿದವರು ಶ್ರೀಗಳು, ಒಳ್ಳೆಯ ಕೆಲಸ ಮಾಡುವುದಿದ್ದರೆ ಇಂದೇ ಮಾಡು ಎಂದು ಹೇಳುತ್ತಿದ್ದು, ಅದರಂತೆ ಬದುಕಿದವರು. ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಶ್ರೀಗಳ ಕೊಡುಗೆ ಅಪಾರ ಎಂದರು.
ಮರಿಯಾಲ ಮುರುಘರಾಜೇಂದ್ರ ಸಂಸ್ಥಾನ ಮಠದ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ನಾಡು ಮನುಕುಲದ ಉದ್ಧಾರಕ್ಕೆ ಅವತರಿಸಿದ ಮಹನೀಯರಲ್ಲಿ ರಾಜೇಂದ್ರ ಶ್ರೀಗಳು ಪ್ರಮುಖರು. ಭಿಕ್ಷಾಟನೆ ಮಾಡಿ ಶಿಕ್ಷಣಕ್ಕೆ ಒತ್ತು ಕೊಟ್ಟ ಶ್ರೀಗಳು, 12ನೇ ವಯಸ್ಸಿಗೆ ಪೀಠಾಧಿಪತಿಯಾದರು. ಅವರ ಕಾಯಕವನ್ನು ಇಂದಿನ ಜಗದ್ಗುರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಶ್ಲಾಘಿಸಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಎಂ. ಪ್ರಭು, ಪದವಿ ಪೂರ್ವ ಕಾಲೇಜಿನ ಪ್ರಾರ್ಚಾಯ ಎನ್. ಮಹದೇವಸ್ವಾಮಿ, ನರ್ಸಿಂಗ್ ಶಾಲೆಯ ಪ್ರಾಂಶುಪಾಲ ಹೇಮೇಶ್ಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.