ಮಹದೇಶ್ವರ ಬೆಟ್ಟ: ಕೊರೊನಾ ವೈರಸ್ ವಿರುದ್ಧ ನಡೆದ ಜನತಾ ಕರ್ಫ್ಯೂ ಕಾರಣದಿಂದ ಸುಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟ ಭಾನುವಾರ ಖಾಲಿ ಖಾಲಿಯಾಗಿತ್ತು.
ಬೆಟ್ಟದ ನಿವಾಸಿಗಳು ಕೂಡ ಮನೆಯಲ್ಲೇ ಉಳಿದರು. ಅರ್ಚಕರು, ಆನೆ ಪಾಲಕರು, ಪ್ರಾಧಿಕಾರದ ಬೆರಳೆಣಿಕೆಯಷ್ಟು ಸಿಬ್ಬಂದಿ ಬಿಟ್ಟರೆ ಸ್ಥಳೀಯರಾಗಲಿ, ಹೊರಗಿನ ಭಕ್ತರಾಗಲಿ ಯಾರೊಬ್ಬರೂ ದೇವಸ್ಥಾನದತ್ತ ಸುಳಿಯಲಿಲ್ಲ. ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿದ್ದವು. ವಾಹನ ಸಂಚಾರವೂ.
ಸೋಂಕು ಹರಡುವುದನ್ನು ತಡೆಗಟ್ಟುವುದಕ್ಕಾಗಿ ದೇವಾಲಯಕ್ಕೆ ಭಕ್ತರ ಭೇಟಿಯನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಆದರೆ, ಸ್ಥಳೀಯರಾದರೂ ಮಾದಪ್ಪನ ದರ್ಶನಕ್ಕೆ ಬರುತ್ತಿದ್ದರು.
ಜಾತ್ರೆ ಸಮಯ: ಬೆಟ್ಟದಲ್ಲಿ ಈಗ ಯುಗಾದಿ ಜಾತ್ರೆಯ ಸಮಯ. ವೇಳಾಪಟ್ಟಿ ಪ್ರಕಾರ 21ರಿಂದಲೇ ಜಾತ್ರೆ ಆರಂಭವಾಗುತ್ತದೆ. ಈ ಬಾರಿ ಕೊರೊನಾ ಕಾರಣಕ್ಕೆ ಜಾತ್ರೆಯನ್ನು ರದ್ದುಪಡಿಸಲಾಗಿದೆ.
ಈ ಅವಧಿಯಲ್ಲಿ ದೇವಾಲಯಕ್ಕೆ ಲಕ್ಷಾಂತರ ಮಂದಿ ಬರುತ್ತಾರೆ. ಎಲ್ಲವೂ ಸರಿಯಾಗಿದ್ದರೆ, ಭಾನುವಾರ ಬೆಟ್ಟದಲ್ಲಿ ಒಂದರಿಂದ ಒಂದೂವರೆ ಲಕ್ಷದಷ್ಟು ಜನ ಸೇರುತ್ತಿದ್ದರು. ಆದರೆ, ನಿರ್ಬಂಧ ಹಾಗೂ ಜನತಾ ಕರ್ಫ್ಯೂ ಕಾರಣಕ್ಕೆ ಬೆಟ್ಟದತ್ತ ಯಾರೂ ಬಂದಿಲ್ಲ.
200 ಸಿಬ್ಬಂದಿಗೆ ರಜೆ: ದೇವಾಲಯದಲ್ಲಿ ಪ್ರಾಧಿಕಾರದ ಅಡಿಯಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುವ 200 ಸಿಬ್ಬಂದಿಗೆ ಮುಂದಿನ ಆದೇಶವರೆಗೆ ರಜೆ ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಹೇಳಿದ್ದಾರೆ.