ಹನೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಸೋಮವಾರ ವಾಸ್ತವ್ಯ ಹೂಡಲಿರುವ ತಾಲ್ಲೂಕಿನ ಪಚ್ಚದೊಡ್ಡಿ ಗ್ರಾಮ ಮೂಲಸೌಕರ್ಯಗಳಿಂದ ವಂಚಿತವಾಗಿದೆ.
ಗ್ರಾಮವುಮಲೆಮಹದೇಶ್ವರ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ ಬರುವುದರಿಂದ, ಇಲ್ಲಿನ ಗ್ರಾಮಸ್ಥರು ಕಾಡುಪ್ರಾಣಿಗಳ ಭಯದಿಂದ ಜೀವನ ನಡೆಸುತ್ತಿದ್ದಾರೆ.
ಹನೂರಿನಿಂದ 15ಕಿ.ಮೀ.ದೂರದಲ್ಲಿ ಗ್ರಾಮವಿದೆ. ಕಚ್ಚಾರಸ್ತೆಯಮೂಲಕಮಾತ್ರಸಂಪರ್ಕ ಹೊಂದಿದೆ. ಇಲ್ಲಿ 42 ಕುಟುಂಬಗಳಿದ್ದು, 150 ಜನಸಂಖ್ಯೆ ಹೊಂದಿದೆ. ಕಿರಿಯ ಪ್ರಾಥಮಿಕ ಶಾಲೆ ಇದೆ. ಅಲ್ಲಿ 14 ಮಕ್ಕಳು ಕಲಿಯುತ್ತಿದ್ದಾರೆ. ಹೆಚ್ಚಿನ ಶಿಕ್ಷಣಕ್ಕಾಗಿ ಗ್ರಾಮದ 16 ಮಕ್ಕಳು ಅಜ್ಜೀಪುರ, ರಾಮಾಪುರ ಹಾಗೂ ಕಾಂಚಳ್ಳಿ ಗ್ರಾಮಕ್ಕೆ ತೆರಳುತ್ತಿದ್ದಾರೆ.
ವಾಹನ ಸೌಲಭ್ಯವಿಲ್ಲ:ಗ್ರಾಮವು ಅರಣ್ಯದೊಳಗಿರುವುದರಿಂದ ಇಲ್ಲಿಗೆ ಹೋಗಲು ವಾಹನಸೌಕರ್ಯಗಳಿಲ್ಲ. ಕಲ್ಲುಮುಳ್ಳುಗಳ ಕಡಿದಾದಹಾದಿಯಲ್ಲೇಕಾಲ್ನಡಿಗೆಯಲ್ಲಿಸಾಗಬೇಕು.ಜೊತೆಗೆಕಾಡುಪ್ರಾಣಿಗಳ ಭೀತಿಯಿದ್ದು, ಮಕ್ಕಳು ಭಯದಿಂದಲೇಸಂಚರಿಸಬೇಕಿದೆ.
‘ರಸ್ತೆ ಸರಿಯಿಲ್ಲದ ಪರಿಣಾಮ ವಾಹನಗಳು ಇಲ್ಲಿಗೆ ಬರುವುದಿಲ್ಲ. ದ್ವಿಚಕ್ರ ವಾಹನವಿರುವವರು ತಮ್ಮ ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತಾರೆ. ಆದರೆ, ನಮ್ಮಲ್ಲಿ ವಾಹನವಿಲ್ಲ. ಆದ್ದರಿಂದ ಅವರು ನಡೆದೇ ಶಾಲೆಗೆ ತೆರಳಬೇಕಿದೆ’ ಎಂದು ಇಲ್ಲಿನ ಗ್ರಾಮಸ್ಥರು ಹೇಳುತ್ತಾರೆ.
ಉಚಿತ ಅಕ್ಕಿ ತರಲು ಖರ್ಚು
ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ಪಡಿತರವನ್ನು ಪಡೆಯಲು ಗ್ರಾಮಸ್ಥರು ನೂರಾರು ರೂಪಾಯಿ ಖರ್ಚು ಮಾಡಿಕೊಂಡು ಐದಾರು ಕಿ.ಮೀ ದೂರದಲ್ಲಿರುವ ಬಸಪ್ಪನದೊಡ್ಡಿಗೆ ಹೋಗಬೇಕು.
‘ಉಚಿತವಾಗಿ ನೀಡುವ ಅಕ್ಕಿ ಪಡೆಯಲು ಮೂರು– ನಾಲ್ಕು ಕುಟುಂಬಗಳು ಸೇರಿ ಬಾಡಿಗೆಗೆ ಆಟೊ ಮಾಡಿಕೊಂಡು ಹೋಗುತ್ತೇವೆ. ಗ್ರಾಮದಲ್ಲೇ ಒಂದು ಅಂಗಡಿ ತೆರೆಯುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮದ ಮನ್ನಮ್ಮ ಅಳಲುತೋಡಿಕೊಂಡರು.
ಗ್ರಾಮದಲ್ಲಿ ಮೂಲಸೌಕರ್ಯದ ಕೊರತೆ ಒಂದೆಡೆಯಾದರೆ, ಪ್ರತಿನಿತ್ಯ ಕಾಡುವ ವನ್ಯಪ್ರಾಣಿಗಳ ಭಯ ಇನ್ನೊಂದೆಡೆ. ರಾತ್ರಿ ವೇಳೆ ಜಮೀನಿಗೆ ಬರುವ ಕಾಡಾನೆಗಳು ಫಸಲು ನಾಶ ಮಾಡುವುದರ ಜೊತೆಗೆ ರೈತರ ಮೇಲೂ ದಾಳಿ ನಡೆಸಿವೆ.
‘ಈ ಹಿಂದೆ ಗ್ರಾಮಕ್ಕೆ ರಸ್ತೆ ಮಂಜೂರಾಗಿತ್ತು. ಆದರೆ, ಅರಣ್ಯ ಇಲಾಖೆ ಅನುಮತಿ ನೀಡದ ಕಾರಣ ರಸ್ತೆ ಕಾಮಗಾರಿ ನಡೆಯಲಿಲ್ಲ. ಶಾಲಾ ಮಕ್ಕಳು ಹಾಗೂ ಗ್ರಾಮದ ಹಿತದೃಷ್ಟಿಯಿಂದ ರಸ್ತೆ ನಿರ್ಮಾಣ ಮಾಡಬೇಕು’ ಎಂದು ಗ್ರಾಮದ ಜಡೇಸ್ವಾಮಿ ಒತ್ತಾಯಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು, ‘ಗ್ರಾಮವು ವನ್ಯಧಾಮ ಹಾಗೂ ಪರಿಸರ ಸೂಕ್ಷ್ಮ ವ್ಯಾಪ್ತಿಯಲ್ಲಿರುವುದರಿಂದ ಡಾಂಬರೀಕರಣಕ್ಕೆ ಅವಕಾಶವಿಲ್ಲ. ಪ್ರಸಕ್ತ ಇರುವ ರಸ್ತೆಯಲ್ಲಿ ಉಂಟಾಗಿರುವ ಗುಂಡಿಗಳನ್ನು ಮುಚ್ಚಿ ಕಚ್ಚಾ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಲಾಗುವುದು’ ಎಂದರು.
‘ವಾಹನ ಸೌಲಭ್ಯಕ್ಕೆ ಸಂಬಂಧಿಸಿದಂತೆ ದೊಡ್ಡಾಣೆ ಗ್ರಾಮದಲ್ಲಿ ಪರಿಸರ ಅಭಿವೃದ್ಧಿ ಸಮಿತಿ ವತಿಯಿಂದ ಜೀಪ್ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದು, ಅದು ಯಶಸ್ವಿಯಾಗಿ ನಡೆಯುತ್ತಿದೆ. ಇದೇ ಮಾದರಿಯಲ್ಲಿ ಶಾಲಾ ಮಕ್ಕಳಿಗೆ ಹಾಗೂ ತುರ್ತು ಸಂದರ್ಭಗಳಿಗೆ ಗ್ರಾಮದಲ್ಲಿರುವ ಪರಿಸರ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು’ ಎಂದು ಹೇಳಿದರು.
ಮಕ್ಕಳು, ಗ್ರಾಮಸ್ಥರೊಂದಿಗೆ ಸಂವಾದ
ಫೆ.10ರಂದು ಸಂಜೆ 5.30ಕ್ಕೆ ಬರಲಿರುವ ಸಚಿವ ಎಸ್.ಸುರೇಶ್ ಕುಮಾರ್ ಅವರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಮಾಡಲಿದ್ದು, ಸಚಿವರಿಗೆ ಆತಿಥ್ಯ ನೀಡಲು ಗ್ರಾಮಸ್ಥರು ಹಾಗೂ ಮಕ್ಕಳು ಸಿದ್ಧತೆ ನಡೆಸಿದ್ದಾರೆ.
ಸಚಿವರುಶಾಲಾ ಮಕ್ಕಳು ಹಾಗೂ ಗ್ರಾಮಸ್ಥರೊಂದಿಗೆ ಸಂವಾದ ನಡೆಸಲಿದ್ದಾರೆ. ಕಾಂಚಳ್ಳಿ, ಅಜ್ಜಿಪುರ ಹಾಗೂಸುತ್ತಮುತ್ತಲ ಗ್ರಾಮಗಳಗ್ರಾಮಸ್ಥರು ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪರಿಶೀಲನೆ
ಶಾಸಕ ಆರ್.ನರೇಂದ್ರ, ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ, ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ, ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಚಿವರು ವಾಸ್ತವ್ಯ ಹೂಡಲಿರುವ ಕೊಠಡಿ, ಶಾಲಾ ಆವರಣ, ಶೌಚಾಲಯವನ್ನು ಶುದ್ಧಗೊಳಿಸುವ ಕಾರ್ಯ ಭರದಿಂದ ಸಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.