ಚಾಮರಾಜನಗರ: ಕೆಎಸ್ಆರ್ಟಿಸಿ ನೌಕರರ 11ನೇ ದಿನದ ಮುಷ್ಕರದ ನಡುವೆಯೇ, ಚಾಮರಾಜನಗರ ವಿಭಾಗದಲ್ಲಿ ಶನಿವಾರ 268 ಬಸ್ಗಳು ಸಂಚಾರ ನಡೆಸಿವೆ.
520 ಚಾಲಕರು, ನಿರ್ವಾಹಕರು ಹಾಗೂ 130ರಷ್ಟು ಮೆಕ್ಯಾನಿಕ್ಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ.ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಬಸ್ಗಳು ಓಡಾಟ ನಡೆಸಿವೆ.
ಐವರ ವಜಾ: ಈ ಮಧ್ಯೆ, ವಿಭಾಗದ ಐವರು ನೌಕರರನ್ನು ಕೆಎಸ್ಆರ್ಟಿಸಿ ವಜಾ ಮಾಡಿ ಆದೇಶ ಹೊರಡಿಸಿದೆ. ಈ ಪೈಕಿ ನಾಲ್ವರು ಚಾಲಕ ಕಂ ನಿರ್ವಾಹಕರಾಗಿದ್ದು, ಒಬ್ಬರು ನಿರ್ವಾಹಕರಾಗಿದ್ದಾರೆ.
‘ಇಬ್ಬರನ್ನು ಕರ್ತವ್ಯಕ್ಕೆ ಗೈರಾದ ಕಾರಣಕ್ಕೆ ಕೆಲಸದಿಂದ ತೆಗೆಯಲಾಗಿದ್ದು, ಇನ್ನೂ ಮೂವರ ವಿರುದ್ಧವೂ ಕರ್ತವ್ಯಲೋಪದ ಆರೋಪಗಳಿವೆ’ ಎಂದು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಮಾತಿನ ಚಕಮಕಿ: ಖಾಸಗಿ ಹಾಗೂ ಕೆಎಸ್ಆರ್ಟಿಸಿ ಬಸ್ಗಳು ನಗರದ ಕೆಎಸ್ಆರ್ಟಿಸಿ ನಿಲ್ದಾಣದಿಂದಲೇ ಕಾರ್ಯಾಚರಿಸುತ್ತಿವೆ. ಪ್ರಯಾಣಿಕರನ್ನು ಹತ್ತಿಸುವ ವಿಚಾರದಲ್ಲಿ ಖಾಸಗಿ ಹಾಗೂ ಕೆಎಸ್ಆರ್ಟಿಸಿ ಸಿಬ್ಬಂದಿ ನಡುವೆ ಪದೇ ಪದೇ ಮಾತಿನ ಚಕಮಕಿ ನಡೆಯುತ್ತಿದೆ.
ನಾಲ್ಕೈದು ದಿನಗಳಿಂದ ರಸ್ತೆಗಿಳಿಯುತ್ತಿರುವ ಕೆಎಸ್ಆರ್ಟಿಸಿ ಬಸ್ಗಳ ಸಂಖ್ಯೆ ಹೆಚ್ಚಾಗಿದೆ. ಸಾರಿಗೆ ಬಸ್ಗಳು ಪ್ರಯಾಣಿಕರನ್ನು ತುಂಬಿದರೆ, ತಮಗೆ ನಷ್ಟವಾಗುತ್ತದೆ ಎಂಬುದು ಖಾಸಗಿಯವರ ಆರೋಪ.