ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು: ₹98.56 ಕೋಟಿ ಮೌಲ್ಯದ ಬಿಯರ್‌, ಕಚ್ಚಾವಸ್ತು ಜಪ್ತಿ

ಡಿಸಿಗೆ ಅನಾಮಧೇಯ ಕರೆಯ ಆಧಾರದಲ್ಲಿ ನಂಜನಗೂಡಿನ ಯುಬಿ ಬಿಯರ್‌ ತಯಾರಿಕಾ ಘಟಕದಲ್ಲಿ ತಪಾಸಣೆ
Published 3 ಏಪ್ರಿಲ್ 2024, 14:19 IST
Last Updated 3 ಏಪ್ರಿಲ್ 2024, 14:19 IST
ಅಕ್ಷರ ಗಾತ್ರ

ಚಾಮರಾಜನಗರ: ಲೆಕ್ಕಕ್ಕಿಂತ ಹೆಚ್ಚುವರಿಯಾಗಿ 7,000 ಬಿಯರ್‌ ರಟ್ಟಿನ ಪೆಟ್ಟಿಗೆಗಳು ಪತ್ತೆಯಾದ ಕಾರಣದಿಂದ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ತಾಂಡ್ಯಾ ಕೈಗಾರಿಕಾ ಪ್ರದೇಶದಲ್ಲಿರುವ ಯುನೈಟೆಡ್‌ ಬ್ರಿವರೀಸ್‌ (ಯುಬಿ) ಲಿಮಿಟೆಡ್‌ನ ಬಿಯರ್‌ ತಯಾರಿಕಾ ಘಟಕವನ್ನು ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. 

ಘಟಕದಲ್ಲಿದ್ದ 6.03 ಲಕ್ಷ ಬಿಯರ್‌ ಪೆಟ್ಟಿಗೆಗಳು, ಕೆಗ್‌ಗಳಲ್ಲಿರುವ 23,160 ಲೀಟರ್‌, ದಾಸ್ತಾನು 5.16 ಲಕ್ಷ ಲೀಟರ್‌, ಯುಟಿ ಟ್ಯಾಂಕ್‌ನಲ್ಲಿರುವ 66.16 ಲಕ್ಷ ಲೀಟರ್‌ ಬಿಯರ್‌,  6.50 ಲಕ್ಷ ಕೆಜಿ ಕಚ್ಚಾವಸ್ತು ಸೇರಿದಂತೆ ಒಟ್ಟು ₹98.52 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

‘ನಂಜನಗೂಡು ಕ್ಷೇತ್ರವು ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಸಿ.ಟಿ. ಶಿಲ್ಪಾ ನಾಗ್‌ ಹೇಳಿದ್ದಾರೆ. 

ಘಟಕದಲ್ಲಿ ನಿಗದಿಗಿಂತ ಹೆಚ್ಚುವರಿ ಬಿಯರ್‌ ತಯಾರಿಸಿ ಕೇರಳಕ್ಕೆ ಸಾಗಿಸಿರುವ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಮಂಗಳವಾರ ಅನಾಮಧೇಯ ಕರೆ ಬಂದಿತ್ತು. ಇದರ ಆಧಾರದಲ್ಲಿ ಅವರು ಘಟಕಕ್ಕೆ ತೆರಳಿ ಪರಿಶೀಲನೆ ನಡೆಸುವಂತೆ ಜಿಲ್ಲಾ ಅಬಕಾರಿ ಉಪ ಆಯುಕ್ತ ನಾಗಶಯನ ಅವರಿಗೆ ಸೂಚನೆ ನೀಡಿದ್ದರು. ಮೈಸೂರಿನ ಅಬಕಾರಿ ಜಂಟಿ ಆಯುಕ್ತರ ಮಾರ್ಗದರ್ಶನೊಂದಿಗೆ ಅಬಕಾರಿ ಅಧಿಕಾರಿಗಳು ನಂಜನಗೂಡಿನ ಯುಬಿ ಘಟಕಕ್ಕೆ  ಮಂಗಳವಾರ ಮಧ್ಯಾಹ್ನ ಭೇಟಿ ನೀಡಿ, ಲೆಕ್ಕದ ಪುಸ್ತಕದೊಂದಿಗೆ ಭೌತಿಕ ದಾಸ್ತಾನು ಪರಿಶೀಲಿಸಿದಾಗ 7000ದಷ್ಟು ಬಿಯರ್‌ ಪೆಟ್ಟಿಗೆಗಳನ್ನು ಹೆಚ್ಚುವರಿಯಾಗಿ ದಾಸ್ತಾನು ಮಾಡಿದ್ದು ಕಂಡು ಬಂದಿದೆ. 

‘ಅಬಕಾರಿ ಕಾಯ್ದೆಯ ಅಡಿಯಲ್ಲಿ ಗಂಭೀರ ಪ್ರಕರಣವಾಗಿರುವುದರಿಂದ, ಪ್ರಕರಣ ದಾಖಲಿಸಿಕೊಂಡು ಘಟಕದಲ್ಲಿರುವ ಎಲ್ಲ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಅಕ್ಷರಶಃ ಇಡೀ ಘಟಕವನ್ನೇ ಜಪ್ತಿ ಮಾಡಿದಂತಾಗಿದೆ’ ಎಂದು ಅಬಕಾರಿ ಅಧಿಕಾರಿಗಳು ’ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

ಘಟನೆ ಸಂಬಂಧ, ಘಟಕ ಮತ್ತು 17 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಎಲ್ಲರೂ ತಲೆ ಮರೆಸಿಕೊಂಡಿದ್ದಾರೆ. 

ಕೇರಳಕ್ಕೆ ಹೋಗಿ ವಾಪಸ್‌ ಬಂದಿತ್ತು: ‘ಘಟಕದಲ್ಲಿ 14 ಸಾವಿರ ಪೆಟ್ಟಿಗೆಗಳಷ್ಟು ಬಿಯರ್‌ ತಯಾರಿಸಿ 7000ಕ್ಕೆ ಮಾತ್ರ ಲೆಕ್ಕ ತೋರಿಸಲಾಗಿತ್ತು.  7000 ಸಾವಿರ ಪೆಟ್ಟಿಗೆಗಳನ್ನು ಕೇರಳಕ್ಕೆ ಸಾಗಿಸಲಾಗಿತ್ತು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಘಟಕಕ್ಕೆ ಅಧಿಕಾರಿಗಳು ಭೇಟಿ ನೀಡುವ ಹೊತ್ತಿಗೆ ಆ ಪೆಟ್ಟಿಗೆಗಳನ್ನು ವಾಪ‍ಸ್‌ ಘಟಕದಲ್ಲಿ ತಂದಿರಿಸಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT