ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಆದಿ ಕರ್ನಾಟಕ ವಿದ್ಯಾರ್ಥಿನಿ ನಿಲಯದ (ಕೆ.ಸಿ.ರಂಗಯ್ಯ ಹಾಸ್ಟೆಲ್) ಜಾಗವನ್ನು ಅಕ್ರಮವಾಗಿ ಪರಭಾರೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣ ಪೊಲೀಸರು ಮೂರನೇ ಆರೋಪಿ ಸಿ.ಎಸ್.ಗೋವಿಂದರಾಜು ಅವರನ್ನು ಬಂಧಿಸಿದ್ದಾರೆ.
ಹಾಸ್ಟೆಲ್ಗೆ ಸೇರಿದ ಸರ್ವೆ ನಂಬರ್ 295/4ಡಿಯಲ್ಲಿರುವ ಎಂಟು ಗುಂಟೆ ಜಮೀನನ್ನು 2ನೇ ಆರೋಪಿ ಕೆ.ಬಿ.ಹರೀಶ್ ಎಂಬುವವರಿಂದ ನಗರದ ಶಂಕರಪುರ ಬಡಾವಣೆಯ ಗೋವಿಂದರಾಜು ಅವರು ₹13.16 ಲಕ್ಷಕ್ಕೆ ಕ್ರಯಕ್ಕೆ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಹಾಸ್ಟೆಲ್ ಜಾಗವನ್ನು ಅಕ್ರಮ ಪರಭಾರೆ ಮಾಡಿರುವ ಸಂಬಂಧ ಪಟ್ಟಣ ಠಾಣೆಯಲ್ಲಿ ಮಾರ್ಚ್ 22ರಂದು 14 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಎಲ್ಲರೂ ತಲೆಮರೆಸಿಕೊಂಡಿದ್ದರು.
‘ಗೋವಿಂದರಾಜು ಅವರು ಈಗ ಸಿಕ್ಕಿ ಬಿದ್ದಿದ್ದಾರೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದವರು ತಲೆಮರೆಸಿಕೊಂಡಿದ್ದು, ಉಳಿದವರ ಪತ್ತೆಗೆ ಕ್ರಮವಹಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.