ಚಾಮರಾಜನಗರ: ‘ಜಿಲ್ಲೆಯಲ್ಲಿ ಅಭಿವೃದ್ಧಿಗೆ ಸಾಕಷ್ಟು ಅವಕಾಶ ಇದೆ. ಅದೊಂದು ಚಳವಳಿಯ ರೂಪದಲ್ಲಿ ನಡೆಯಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಂಗಳವಾರ ಪ್ರತಿಪಾದಿಸಿದರು.
ಸಾಹಿತ್ಯ ಸಮ್ಮೇಳನದಲ್ಲಿ‘ಚೆಲುವ ಚಾಮರಾಜನಗರ–2030 ಮುನ್ನೋಟ’ ಎಂಬ ವಿಷಯದ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲೆ ಅಭಿವೃದ್ಧಿ ಹೊಂದಲು ಇರುವ ಅವಕಾಶಗಳು ಹಾಗೂ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ವಿವರಿಸಿದರು. ತಮ್ಮ ಕಲ್ಪನೆಯ ‘ಚೆಲುವ ಚಾಮರಾಜನಗರ’ದ ಬಗ್ಗೆಯೂ ಪ್ರಸ್ತಾಪಿಸಿದರು.
‘ಚಾಮರಾಜನಗರ ದಾರ್ಶನಿಕರ ನಾಡು. ಪ್ರಾಕೃತಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಅತ್ಯಂತ ಸಂಪದ್ಭರಿತವಾದ ಜಿಲ್ಲೆ. ಜಾನಪದ ಸಂಸ್ಕೃತಿ, ಗ್ರಾಮೀಣ ಸೊಗಡು ಇಲ್ಲಿ ಶ್ರೀಮಂತವಾಗಿದೆ. ಅಭಿವೃದ್ಧಿಗೆ ಇಲ್ಲಿ ಸಾಕಷ್ಟು ಅವಕಾಶಗಳಿವೆ’ ಎಂದು ಹೇಳಿದರು.
‘ಈ ಜಿಲ್ಲೆಯ ಬಗ್ಗೆ ಎಲ್ಲರಿಗೂ ತಾತ್ಸಾರ. ಸ್ವತಃ ಇಲ್ಲಿನವರು ಕೂಡ ತಾವು ಚಾಮರಾಜನಗರದವರು ಎಂದು ಹೇಳಿಕೊಳ್ಳಲು ಇಂದು ಹಿಂಜರಿಯುತ್ತಾರೆ. ಸಂಸ್ಕೃತಿ, ಸಮಾಜ ಬೆಳೆಯಲು ನಮ್ಮ ಮನಃಸ್ಥಿತಿ ಬಹಳ ಮುಖ್ಯ. ಅಭಿಯಾನದ ಕಿಚ್ಚು ನಮ್ಮ ಒಳಗಿನಿಂದಲೇ ಹುಟ್ಟಬೇಕು’ ಎಂದರು.
‘ನಮ್ಮಲ್ಲಿ ಕೃಷಿ ಬೆಳೆಗಳು ಸಾಕಷ್ಟು ಇವೆ. ಅವುಗಳ ಮೌಲ್ಯವರ್ಧನೆ ಮಾಡುವುದಕ್ಕೆ ಅವಕಾಶ ಇದೆ. ಜವಳಿ ಉದ್ಯಮ ಹಬ್ ಆಗುವುದಕ್ಕೆ ಅವಕಾಶ ಇದೆ. ನಮ್ಮಲ್ಲಿ ಕೌಶಲ ರಹಿತ ಹಾಗೂ ಅರೆ ಕೌಶಲ ಮಾನವ ಸಂಪನ್ಮೂಲ ಸಾಕಷ್ಟು ಇದೆ. ಅವರಿಗೆ ತರಬೇತಿ ನೀಡುವ ಕೆಲಸ ಆಗಬೇಕಾಗಿದೆ. ಪರಿಸರ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ’ ಎಂದರು.