ಚಾಮರಾಜನಗರ: ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರು ಸೋಮವಾರ ಬಿಜೆಪಿ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಮೈತ್ರಿ ಸರ್ಕಾರದ ವಿಶ್ವಾತ ಮತಯಾತನೆ ಸಂದರ್ಭದಲ್ಲಿ ಸದನಕ್ಕೆ ಗೈರಾಗಿದ್ದಕ್ಕೆ ಬಿಎಸ್ಪಿಯಿಂದ ಉಚ್ಚಾಟನೆ ಗೊಂಡಿರುವ ಮಹೇಶ್, ಇತ್ತೀಚಿನ ದಿನಗಳಲ್ಲಿ ಬಿಜೆಪಿ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ. ಹೀಗಾಗಿ, ಬಿಜೆಪಿ ಸೇರುವ ಪ್ರಯತ್ನ ನಡೆಸಿದ್ದಾರೆಯೇ ಎಂಬ ಅನುಮಾನಗಳು ಮೂಡಿವೆ.
ಕೊಳ್ಳೇಗಾಲ ನಗರಸಭೆಯ ಆಡಳಿತ ಚುಕ್ಕಾಣಿ ಹಿಡಿಯಲೂ ಮಹೇಶ್ ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಬಿಜೆಪಿ ಬೆಂಬಲ ಪಡೆಯುವುದು ಅನಿವಾರ್ಯ. ಈ ವಿಚಾರವಾಗಿಯೂ ಪ್ರಸಾದ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
‘ಪ್ರಸಾದ್–ಮಹೇಶ್ ಭೇಟಿ ನಡೆದಿರುವುದು ನಿಜ. ಆದರೆ, ಕೊಳ್ಳೇಗಾಲ ನಗರಸಭೆ ವಿಚಾರವಾಗಿ ಚರ್ಚೆ ನಡೆದಿದೆ. ಮಹೇಶ್ ಜೊತೆ ನಗರಸಭೆಯ 14 ಸದಸ್ಯರು ಬಂದಿದ್ದರು’ ಎಂದು ಪ್ರಸಾದ್ ಆಪ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.