ಗುಂಡ್ಲುಪೇಟೆ: ವಿದ್ಯುತ್ ವ್ಯತ್ಯಯದ ಬಗ್ಗೆ ಸೆಸ್ಕ್ ನೌಕರನಿಗೆ ಕರೆ ಮಾಡಿದ್ದ ಸಂದರ್ಭ ರೈತನಿಗೆ ನೌಕರ ಅವಾಚ್ಯ ಪದಗಳಿಂದ ನಿಂದಿಸಿರುವುದನ್ನು ಖಂಡಿಸಿ ರೈತರು ವೀರನಪುರ ಗೇಟ್ ಬಳಿ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕಚೇರಿಗೆ ಶನಿವಾರ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದರು.
ಪಟ್ಟಣದ ಹೊರ ವಲಯದ ಕಚೇರಿ ಮುಂದೆ ಸಮಾವೇಶಗೊಂಡ ರೈತ ಮುಖಂಡರು ಧಿಕ್ಕಾರ, ಘೋಷಣೆ ಕೂಗಿ ನೌಕರನ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಈ ವೇಳೆ ಕೆಪಿಟಿಸಿಎಲ್ ಜೆಇ ವಾಸಂತಿ ರೈತರ ಸಮಸ್ಯೆ ಆಲಿಸಿದರು. ಏ.26ರಂದು ವಿದ್ಯುತ್ ವ್ಯತ್ಯಯ ಆಗಿದ್ದ ಬಗ್ಗೆ ತಿಳಿಯಲು ನೌಕರರೊಬ್ಬರ ಮೊಬೈಲ್ಗೆ ನೇನೇಕಟ್ಟೆ ಗ್ರಾಮದ ರೈತ ವಿಶ್ವ ಕರೆ ಮಾಡಿದ್ದರು. ಈ ಸಂದರ್ಭ ಪದೇ ಪದೇ ಕರೆ ಮಾಡಿದರು ಎಂಬ ಕಾರಣಕ್ಕೆ ರೈತರನ್ನು ನಿಮ್ಮ ಇಲಾಖೆ ನೌಕರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಪಟ್ಟು ಹಿಡಿದರು.
ಈ ಬಗ್ಗೆ ನೌಕರನಿಂದ ವಿವರಣೆ ಪಡೆದ ಜೆ.ಇ, ಅವರನ್ನು ಬದಲಿ ವಿದ್ಯುತ್ ಪ್ರಸರಣ ಕೇಂದ್ರಕ್ಕೆ ನಿಯೋಜಿಸುವ ಸಂಬಂಧ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ವೇಳೆ ನೌಕರ ರೈತರ ಕ್ಷಮಾಪಣೆ ಕೇಳಿ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟರು. ನಂತರ ಪ್ರತಿಭಟನೆ ಕೈಬಿಡಲಾಯಿತು.
ಈ ಸಂದರ್ಭ ಅರಿಶಿಣ ಬೆಳೆಗಾರರ ರಾಜ್ಯ ಸಂಘಟನೆ ಸಂಚಾಲಕ ಎಂ.ನಾಗಾರ್ಜುನಕುಮಾರ್, ರೈತ ಮುಖಂಡರಾದ ವೀರನಪುರ ನಾಗರಾಜಪ್ಪ, ದೊಡ್ಡತುಪ್ಪೂರು ಶಶಿಕುಮಾರ್, ಮಂಜುನಾಥ್, ವಿಶ್ವ ಹಾಜರಿದ್ದರು.