ಕೊಳ್ಳೇಗಾಲ: ನಟ ಉಪೇಂದ್ರ ಅವರು ಪರಿಶಿಷ್ಟ ಜಾತಿಯನ್ನು ಅವಮಾನಿಸಿದ್ದು ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಆದಿ ದ್ರಾವಿಡ ಮೂಲ ನಿವಾಸಿಗಳ ಹೋರಾಟ ಸಮಿತಿಯವರು 18ನೇ ದಿನವಾದ ಗುರುವಾರ ಕಪ್ಪು ಪಟ್ಟಿಯನ್ನು ಧರಿಸಿ ಪ್ರತಿಭಟನೆ ನಡೆಸಿದರು.
ನಗರದ ಡಾ. ಬಿ.ಆರ್ ಅಂಬೇಡ್ಕರ್ ಮುಖ್ಯ ರಸ್ತೆಯಿಂದ ಹೊರಟ ಪ್ರತಿಭಟನಾಕಾರರು ದಾರಿ ಉದ್ದಕ್ಕೂ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಹೊಂಡರಬಾಳು ಗ್ರಾಮದ ಮುಖಂಡ ಚೆನ್ನರಾಜು ಮಾತನಾಡಿ, ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದರು ಸಹ ಸರ್ಕಾರ ಇದರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸಿಲ್ಲ. ದಿನಕ್ಕೊಂದು ಗ್ರಾಮದವರು ಬಂದು ಪ್ರತಿಭಟನೆಗೆ ಬೆಂಬಲ ನೀಡುತ್ತಿದ್ದೇವೆ. ಹಾಗಾಗಿ ಇಂದು ತಾಲ್ಲೂಕಿನ ಹೊಂಡರಬಾಳು ಗ್ರಾಮದಿಂದ ಬಂದಿದ್ದೇವೆ. ಉಪೇಂದ್ರ ಅವರನ್ನು ಬಂಧಿಸುವವರೆಗೂ ಇದೇ ರೀತಿ ನಿರಂತರವಾಗಿ ಪ್ರತಿಭಟನೆ ಮಾಡುತ್ತಿರುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಹೊಂಡರಬಾಳು ಗ್ರಾಮದ ಮುಖಂಡ , ಗುರುಸಿದ್ದಯ್ಯ, ಎನ್.ಮಹೇಶ್, ರಾಜಪ್ಪ, ಸಿದ್ದರಾಜು, ಶಿವಣ್ಣ, ಅಂಬೇಡ್ಕರ್ ಸಂಘದ ಉಪಾಧ್ಯಕ್ಷ ಕುಮಾರಸ್ವಾಮಿ, ಖಜಾಂಚಿ ಭಾಗ್ಯರಾಜು, ನಾಗರಾಜು, ಆದಿದ್ರಾವಿಡ ಮೂಲನಿವಾಸಿಗಳ ಹೋರಾಟ ಸಮಿತಿಯ ಭೀಮನಗರ ಸಿದ್ಧಾರ್ಥ್, ರಾಜಪ್ಪ, ಅಣಗಳ್ಳಿ ಬಸವರಾಜು, ಸುರೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.