ಚಾಮರಾಜನಗರ: ಗುಂಡ್ಲುಪೇಟೆ ಗಿರಿಜನರ ದೊಡ್ಡ ಪ್ರಮಾಣದ ವಿವಿದೋದ್ದೇಶ ಸಹಕಾರ ಸಂಘದಲ್ಲಿ (ಲ್ಯಾಂಪ್ಸ್) ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಗುಂಡ್ಲುಪೇಟೆ ತಾಲ್ಲೂಕು ಅರಣ್ಯ ಅವಲಂಬಿತ ಆದಿವಾಸಿ ಬುಡಕಟ್ಟು ಸಂಘದ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರವಾಸಿ ಮಂದಿರದ ಬಳಿ ಸೇರಿದ ಪ್ರತಿಭಟನಕಾರರು ಅಲ್ಲಿಂದ ಡೀವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿದರು. ನಂತರ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು.
‘ಗುಂಡ್ಲುಪೇಟೆಯ ಲ್ಯಾಂಪ್ಸ್ನಲ್ಲಿ ₹3 ಕೋಟಿಯಷ್ಟು ಅವ್ಯವಹಾರ ನಡೆದಿದೆ. ಇದಕ್ಕೆ ಕಾರಣಕರ್ತರಾದ ಸಂಘದ ಅಧ್ಯಕ್ಷ ಮುದ್ದಯ್ಯ ಹಾಗೂ ಕಾರ್ಯದರ್ಶಿ ಶಿವರಾಜು ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇವರ ಮೇಲೆ ಕ್ರಮ ಕೈಗೊಂಡು ದುರ್ಬಳಕೆ ಮಾಡಿರುವ ಹಣವನ್ನು ವಾಪಸ್ ಪಡೆಯಬೇಕು’ ಎಂದು ಪ್ರತಿಭಟನನಿರತರು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ ಅವರು, ಪ್ರತಿಭಟನಕಾರರ ಅಹವಾಲು ಕೇಳಿ ಮನವಿ ಪತ್ರ ಸ್ವೀಕರಿಸಿದರು.
ಸಂಘದ ಅಧ್ಯಕ್ಷ ಚೆಲುವರಾಜು, ಮುಖಂಡರಾದ ಮುತ್ತಯ್ಯ, ರಾಜೇಂದ್ರ, ಶಿವು, ನಾಗಮ್ಮ, ವೆಂಕಟೇಶ್, ಬಸಮ್ಮ ಇದ್ದರು.