ಕೊಳ್ಳೇಗಾಲ: ವಾಟ್ಸ್ಆ್ಯಪ್, ಫೇಸ್ಬುಕ್ ಬಿಟ್ಟು ಪರೀಕ್ಷೆಗೆ ಓದು ಎಂದು ಪೋಷಕರು ಬೈದಿದ್ದಕ್ಕೆ ಮನನೊಂದಿದ್ದಳು ಎನ್ನಲಾದ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ನಗರದಲ್ಲಿ ಮಂಗಳವಾರ ಸಂಜೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನಗರದ ದೇವಾಂಗಪೇಟೆಯ ಚೌಡೇಶ್ವರಿ ಗುಡಿ ಬೀದಿಯ ನಿವಾಸಿ ಲೋಕೇಶ್ ಎಂಬುವವರ ಪುತ್ರಿ ದರ್ಶಿನಿ (15) ಆತ್ಮಹತ್ಯೆ ಮಾಡಿಕೊಂಡ ಬಾಲಕಿ.
‘ದರ್ಶಿನಿ, ಸಂಜೆ 6.30ರ ಸಮಯದಲ್ಲಿ ದರ್ಶಿನಿ ಮನೆಯಲ್ಲಿ ಮೊಬೈಲ್ ನೋಡಿಕೊಂಡು ಇದ್ದಳು. ಈ ಸಂದರ್ಭದಲ್ಲಿ ಆಕೆಯ ಪೋಷಕರು, ‘ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಓದಿಕೊಳ್ಳದೇ ಬಿಟ್ಟು ಬರೀ ವ್ಯಾಟ್ಸ್ಆ್ಯಪ್, ಫೇಸ್ ಬುಕ್ ಎಂದು ಮೊಬೈಲ್ ಹಿಡಿದು ಕೊಂಡಿದ್ದೀಯಾ’ ಎಂದು ಬೈದಿದ್ದಾರೆ. ಇದರಿಂದ ಬೇಸರಗೊಂಡ ಆಕೆ ಮೊಬೈಲ್ ಎಸೆದು, ಓದುವುದಾಗಿ ಹೇಳಿ ತನ್ನ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ’ ಪಟ್ಟಣ ಠಾಣೆ ಸಬ್ ಇನ್ಸ್ಪೆಕ್ಟರ್ ರಾಜೇಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಒಂದು ಗಂಟೆ ನಂತರ ಪೋಷಕರು ಕೊಠಡಿಯ ಬಾಗಿಲು ಬಡಿದಿದ್ದಾರೆ. ದರ್ಶಿನಿ ಬಾಗಿಲು ತೆರೆಯಲಿಲ್ಲ. ಕಿಟಕಿಯಿಂದ ನೋಡಿದಾಗ, ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ’ ಎಂದು ಅವರು ಮಾಹಿತಿ ನೀಡಿದರು.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.