ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Results | ಚಾಮರಾಜನಗರ: 7ರಿಂದ 24ನೇ ಸ್ಥಾನಕ್ಕೆ ಕುಸಿದ ಜಿಲ್ಲೆ

Published 10 ಮೇ 2024, 5:25 IST
Last Updated 10 ಮೇ 2024, 5:25 IST
ಅಕ್ಷರ ಗಾತ್ರ

ಚಾಮರಾಜನಗರ: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಯು ಶೇ 73.85ರಷ್ಟು ಫಲಿತಾಂಶ ದಾಖಲಿಸಿದ್ದು, ರಾಜ್ಯದಲ್ಲಿ 24ನೇ ಸ್ಥಾನ ಗಳಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ (ಶೇ 93.92), ಈ ಬಾರಿಯ ಫಲಿತಾಂಶ ಗಣನೀಯವಾಗಿ ಕುಸಿತ ಕಂಡಿದೆ. ಹೋದ ವರ್ಷ ಜಿಲ್ಲೆಯು ರಾಜ್ಯ ಮಟ್ಟದಲ್ಲಿ ಏಳನೇ ಸ್ಥಾನ ಗಳಿಸಿತ್ತು.

ಈ ವರ್ಷ 5,589 ಬಾಲಕರು, 5650 ಬಾಲಕಿಯರು ಸೇರಿದಂತೆ 11,239 ಮಕ್ಕಳು ಪರೀಕ್ಷೆ ಬರೆದಿದ್ದರು. ಈ ಪೈಕಿ 2,659 ಗಂಡು ಮಕ್ಕಳು, 4,641 ಹೆಣ್ಣುಮಕ್ಕಳು ಸೇರಿ 7,300 ಮಕ್ಕಳು ತೇರ್ಗಡೆಯಾಗಿದ್ದಾರೆ.

ಸರ್ಕಾರಿ ಆದರ್ಶ ವಿದ್ಯಾಲಯದ ಮಕ್ಕಳು ಈ ಬಾರಿ ಪಾರಮ್ಯ ಸಾಧಿಸಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ 10 ವಿದ್ಯಾರ್ಥಿಗಳ ಪೈಕಿ, ಎಂಟು ಮಂದಿ ವಿವಿಧ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದಾರೆ.

ಜಿಲ್ಲೆಯ ಸಾಧಕರು: 625ರಲ್ಲಿ 619 ಅಂಕಗಳನ್ನು ಗಳಿಸಿರುವ ಗುಂಡ್ಲುಪೇಟೆಯ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ರತ್ನಮ್ಮ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದ್ದಾಳೆ.

ಕೊಳ್ಳೇಗಾಲ ಆದರ್ಶ ವಿದ್ಯಾಲಯದ ಪ್ರಜನ್‌ ಮತ್ತು ಸಂಜನಾ ಅವರು ತಲಾ 618 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಚಾಮರಾಜನಗರದ ಮಲ್ಲಯ್ಯನಪುರದಲ್ಲಿರುವ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಆರ್ಯ ಎಂ.ಅರುಣ್‌ 617 ಅಂಕಗಳನ್ನು ಗಳಿಸಿ ಜಿಲ್ಲೆಗೆ ತೃತೀಯ ಸ್ಥಾನಿಯಾಗಿದ್ದಾನೆ.

ಶೇ 100 ಫಲಿತಾಂಶ: ಜಿಲ್ಲೆಯ ಆರು ಸರ್ಕಾರಿ ಮತ್ತು ಎರಡು ಖಾಸಗಿ ಶಾಲೆಗಳು ಸೇರಿದಂತೆ ಎಂಟು ಶಾಲೆಗಳು ಮಾತ್ರ ಶೇ 100ರಷ್ಟು ಫಲಿತಾಂಶ ದಾಖಲಿಸಿವೆ. ಕಳೆದ ವರ್ಷ 49 ಪ್ರೌಢ ಶಾಲೆಗಳಲ್ಲಿ ಎಲ್ಲ ಮಕ್ಕಳೂ ತೇರ್ಗಡೆಯಾಗಿದ್ದರು.

ಚಾಮರಾಜನಗರ ಮತ್ತು ಕೊಳ್ಳೇಗಾಲದ ಆದರ್ಶ ವಿದ್ಯಾಲಯಗಳು, ಗುಂಡ್ಲುಪೇಟೆ ಮತ್ತು ಚಾಮರಾಜನಗರ ತಾಲ್ಲೂಕಿನ ಹರವೆಯ ಮೊರಾರ್ಜಿ ವಸತಿ ಶಾಲೆಗಳು, ಚಾಮರಾಜನಗರ ತಾಲ್ಲೂಕಿನ ಜ್ಯೋತಿಗೌಡನಪುರದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಹರದನಹಳ್ಳಿಯ ಅಂಬೇಡ್ಕರ್‌ ವಸತಿ ಶಾಲೆ, ಚಾಮರಾಜನಗರದ ಸೇವಾ ಭಾರತಿ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆ ಮತ್ತು ಕೊಳ್ಳೇಗಾಲದ ಕಾಮಗೆರೆಯ ಸೇಂಟ್‌ ಕ್ಸೇವಿಯರ್‌ ಪ್ರೌಢ ಶಾಲೆ ಶೇ 100ಫಲಿತಾಂಶ ದಾಖಲಿಸಿವೆ.  

ಬಾಲಕಿಯರ ಮೇಲುಗೈ: ಈ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ 82.14 ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದರೆ, ತೇರ್ಗಡೆಯಾದ ಬಾಲಕರು ಶೇ 65.47. 

ಗ್ರಾಮೀಣ ಭಾಗದಲ್ಲಿ 7,263 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 5,188 ಮಂದಿ ಉತ್ತೀರ್ಣರಾಗುವ ಮೂಲಕ ಶೇ 71.43ರಷ್ಟು ಫಲಿತಾಂಶ ದಾಖಲಾಗಿದೆ. ನಗರ ಪ್ರದೇಶದಲ್ಲಿ ಪರೀಕ್ಷೆ ತೆಗೆದುಕೊಂಡ 3,976 ಮಕ್ಕಳಲ್ಲಿ 3,112 ಮಂದಿ ತೇರ್ಗಡೆಯಾಗುವ ಮೂಲಕ ಶೇ 78.27 ಫಲಿತಾಂಶ ಬಂದಿದೆ.

ಗುಂಡ್ಲುಪೇಟೆಗೆ ಮೊದಲ ಸ್ಥಾನ: ತಾಲ್ಲೂಕುವಾರು ಫಲಿತಾಂಶದಲ್ಲಿ ಗುಂಡ್ಲುಪೇಟೆ ಮೊದಲ ಸ್ಥಾನ ಪಡೆದಿದೆ. ಪರೀಕ್ಷೆ ಬರೆದಿರುವ 2,445 ವಿದ್ಯಾರ್ಥಿಗಳ ಪೈಕಿ 1,923 ಮಂದಿ ಉತ್ತೀರ್ಣರಾಗುವ ಮೂಲಕ ಶೇ 78.65 ಫಲಿತಾಂಶ ದಾಖಲಿಸಿದೆ. 

ಶೇ 73.50ರಷ್ಟು ಫಲಿತಾಂಶ ದಾಖಲಿಸಿರುವ ಕೊಳ್ಳೇಗಾಲ ತಾಲ್ಲೂಕು ಎರಡನೇ ಸ್ಥಾನ ಗಳಿಸಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ ಶೇ 73.13ರಷ್ಟು, ಯಳಂದೂರಿನ ಶೇ 72.40ರಷ್ಟು ಫಲಿತಾಂಶ ಬಂದಿದ್ದು, ಫಲಿತಾಂಶದಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಹನೂರು ಈ ಬಾರಿ ಕೊನೆಯ ಸ್ಥಾನಕ್ಕೆ ಕುಸಿದಿದೆ. 2,267 ಮಕ್ಕಳ ಪೈಕಿ 1,603 ಮಂದಿ ಉತ್ತೀರ್ಣರಾಗುವ ಮೂಲಕ ಶೇ 70.71ರಷ್ಟು ಫಲಿತಾಂಶ ದಾಖಲಾಗಿದೆ.

ಖಾಸಗಿ ಶಾಲೆಗಳು ಅತಿ ಹೆಚ್ಚು ಶೇ 87.22 ಫಲಿತಾಂಶ ದಾಖಲಿಸಿದ್ದರೆ, ಸರ್ಕಾರಿ ಶಾಲೆಗಳು ಶೇ 71.11 ಮತ್ತು ಅನುದಾನಿತ ಶಾಲೆಗಳು ಶೇ 67.81ರಷ್ಟು ಫಲಿತಾಂಶ ದಾಖಲಿಸಿವೆ.

ಉತ್ತಮ ಫಲಿತಾಂಶಕ್ಕೆ ಎಲ್ಲ ಪ್ರಯತ್ನಗಳನ್ನೂ ನಡೆಸಲಾಗಿತ್ತು. ಹಾಗಿದ್ದರೂ ಕಡಿಮೆ ಫಲಿತಾಂಶ ದಾಖಲಾಗಿದೆ‌‌
ಮಲ್ಲಿಕಾರ್ಜುನ ಶಿಕ್ಷಣಾಧಿಕಾರಿ
ಟ್ಯೂಷನ್‌ಗೆ ಹೋಗಿಲ್ಲ
ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ಖುಷಿ ತಂದಿದೆ. ಯಾವುದೇ ಟ್ಯೂಷನ್ ಹೋಗಿಲ್ಲ ಶಾಲೆಯಲ್ಲಿ ಕಲಿತದ್ದನ್ನು ಮನೆಯಲ್ಲಿ ಪುನರಾವರ್ತನೆ ಮಾಡುತ್ತಿದ್ದೆ. ಪೋಷಕರು ಹಾಗೂ ಶಿಕ್ಷಕರು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ನಮ್ಮದು ರೈತ ಕುಟುಂಬ. ವೈದ್ಯೆಯಾಗಬೇಕೆಂಬ ಆಸೆ ಇದೆ. –ರತ್ನಮ್ಮ ಸರ್ಕಾರಿ ಆದರ್ಶ ವಿದ್ಯಾಲಯ ಗುಂಡ್ಲುಪೇಟೆ (ಜಿಲ್ಲೆಗೆ ಮೊದಲ ಸ್ಥಾನ)  ವೈದ್ಯನಾಗುವ ಆಸೆ ಉತ್ತಮ ಅಂಕ ಗಳಿಸಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಮುಖ್ಯವಾಗಿ ಶಿಕ್ಷಕರ ಸಹಕಾರ ಹಾಗೂ ತಂದೆ ತಾಯಿಯ ಸಹಕಾರದಿಂದ ಇದು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ವೈದ್ಯನಾಗಬೇಕು ಎಂಬ ಕನಸನ್ನು ಕಂಡಿದ್ದೇನೆ –ಶ್ರೀಪ್ರಜನ್ ಆದರ್ಶ ವಿದ್ಯಾಲಯ ಕೊಳ್ಳೇಗಾಲ (ಜಿಲ್ಲೆಗೆ 2ನೇ ಸ್ಥಾನ)
ಫಲಿತಾಂಶ ಕುಸಿತಕ್ಕೆ ಕಾರಣವೇನು?
ಕಳೆದ ವರ್ಷ ರಾಜ್ಯದಲ್ಲಿ ಏಳನೇ ಸ್ಥಾನ ಗಳಿಸಿದ್ದ ಜಿಲ್ಲೆಯ ಈ ಬಾರಿ ಕಳಪೆ ಫಲಿತಾಂಶ ದಾಖಲಿಸಿದೆ. ಇದಕ್ಕೆ ಏನು ಕಾರಣ ಎಂಬ ಚರ್ಚೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಿಕ್ಷಕರ ವಲಯದಲ್ಲಿ ನಡೆಯುತ್ತಿದೆ. ಈ ಬಾರಿ ಪರೀಕ್ಷಾ ಪ್ರಕ್ರಿಯೆ ಕಟ್ಟುನಿಟ್ಟಾಗಿ ನಡೆದುದರಿಂದ ಅದರಲ್ಲೂ ವಿಶೇಷವಾಗಿ ಪರೀಕ್ಷಾ ಕೊಠಡಿಯಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರಿಂದ ಉತ್ತಮ ಫಲಿತಾಂಶ ಬರಲಿಲ್ಲ ಎಂಬುದು ಕೆಲವು ಅಧಿಕಾರಿಗಳು ಹಾಗೂ ಬಹುತೇಕ ಶಿಕ್ಷಕರ ಅಭಿಪ್ರಾಯ. ಚಾಮರಾಜನಗರ ಜಿಲ್ಲೆ ಮಾತ್ರವಲ್ಲ. ಹಿಂದಿನ ವರ್ಷಗಳಲ್ಲಿ ರಾಜ್ಯ ಮಟ್ಟದಲ್ಲಿ ಉತ್ತಮ ಸ್ಥಾನಮಾನ ಗಳಿಸಿದ್ದ ಜಿಲ್ಲೆಗಳು ಕೂಡ ಈ ಬಾರಿ ಕಡಿಮೆ ಫಲಿತಾಂಶ ದಾಖಲಿಸಿವೆ. ‘ಜಿಲ್ಲೆಗೆ ಹೆಚ್ಚಿನ ಫಲಿತಾಂಶ ಸಿಗಬೇಕು ಎಂಬ ಕಾರಣಕ್ಕೆ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗುವ ಶಿಕ್ಷಕರು ಅಧಿಕಾರಿಗಳೇ ಮಕ್ಕಳಿಗೆ ಉತ್ತರ ಹೇಳಿಕೊಡುತ್ತಿದ್ದರು. ನಕಲು ಮಾಡುವುದಕ್ಕೆ ಅವಕಾಶ ನೀಡುತ್ತಿದ್ದರು. ಈ ಬಾರಿ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರಿಂದ ಇದು ಸಾಧ್ಯವಾಗಿಲ್ಲ’ ಎಂದು ಶಿಕ್ಷಕರು ಹಾಗೂ ಅಧಿಕಾರಿಗಳು ಖಾಸಗಿಯಾಗಿ ಹೇಳುತ್ತಿದ್ದಾರೆ. ‘ಇದು ಜಿಲ್ಲೆಯ ನಿಜವಾದ ಫಲಿತಾಂಶ. ಇನ್ನೂ ಕಡಿಮೆ ಬರಬಹುದು ಎಂಬ ಆತಂಕ ಹೊಂದಿದ್ದೆವು. ಆದರೆ ಮಕ್ಕಳು ಚೆನ್ನಾಗಿಯೇ ಬರೆದಿದ್ದಾರೆ. ಇನ್ನು ಕೆಲವು ವರ್ಷಗಳ ಕಾಲ ಇದೇ ಮಾದರಿ ಅನುಸರಿಸಿದರೆ ಜಿಲ್ಲೆ ಉತ್ತಮ ಫಲಿತಾಂಶ ದಾಖಲಿಸಲಿದೆ’ ಎಂದು ಶಿಕ್ಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಇಬ್ಬರು ‘ಕಾಡಿನ ಮಕ್ಕಳು’ ತೇರ್ಗಡೆ
ಜಿಲ್ಲಾಡಳಿತ ವಿಶೇಷ ಆಸಕ್ತಿ ವಹಿಸಿ ಮೂರು ತಿಂಗಳ ಕಾಲ ವಿಶೇಷ ತರಬೇತಿ ನೀಡಿದ್ದ ಎಸ್‌ಎಸ್‌ಎಲ್‌ಸಿ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದ 30 ಗಿರಿಜನ ಮಕ್ಕಳಲ್ಲಿ ಇಬ್ಬರು ಮಾತ್ರ ತೇರ್ಗಡೆಯಾಗಲು ಯಶಸ್ವಿಯಾಗಿದ್ದಾರೆ. ಪ್ರಶಾಂತ್‌ ಮತ್ತು ರಾಜೇಶ್‌ ಎಂಬುವವರು ಉತ್ತೀರ್ಣರಾಗಿದ್ದಾರೆ. ಕ್ರಮವಾಗಿ 284 ಮತ್ತು 253 ಅಂಕಗಳನ್ನು ಗಳಿಸಿದ್ದಾರೆ. ಗಿರಿಜನ ಮಕ್ಕಳು ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸಬಾರದು ಎಂಬ ಉದ್ದೇಶದಿಂದ ಜಿಲ್ಲಾಧಿಕಾರಿ ಶಿಲ್ಪಾ ನಾಗ್‌ ಅವರು ವಿಶೇಷ ಆಸಕ್ತಿ ವಹಿಸಿ 30 ಮಕ್ಕಳನ್ನು ಮೂರು ತಿಂಗಳ ಕಾಲ ಹಾಸ್ಟೆಲ್‌ನಲ್ಲಿ ಇರಿಸಿ ವಿಶೇಷ ತರಬೇತಿ ನೀಡಲು ವ್ಯವಸ್ಥೆ ಮಾಡಿದ್ದರು. ಮಕ್ಕಳು ಉತ್ತಮ ಸಾಧನೆ ಮಾಡುವ ನಿರೀಕ್ಷೆಯಲ್ಲಿ ಅಧಿಕಾರಿಗಳು ಇದ್ದರು. ಆದರೆ ಅವರ ಪ್ರಯತ್ನಕ್ಕೆ ದೊಡ್ಡ ಮಟ್ಟಿನ ಯಶಸ್ಸು ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT