ಚಾಮರಾಜನಗರ: 2023-24ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಯು ಶೇ 73.85ರಷ್ಟು ಫಲಿತಾಂಶ ದಾಖಲಿಸಿದ್ದು, ರಾಜ್ಯದಲ್ಲಿ 24ನೇ ಸ್ಥಾನ ಗಳಿಸಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ (ಶೇ 93.92), ಈ ಬಾರಿಯ ಫಲಿತಾಂಶ ಗಣನೀಯವಾಗಿ ಕುಸಿತ ಕಂಡಿದೆ. ಹೋದ ವರ್ಷ ಜಿಲ್ಲೆಯು ರಾಜ್ಯ ಮಟ್ಟದಲ್ಲಿ ಏಳನೇ ಸ್ಥಾನ ಗಳಿಸಿತ್ತು.
ಈ ವರ್ಷ 5,589 ಬಾಲಕರು, 5650 ಬಾಲಕಿಯರು ಸೇರಿದಂತೆ 11,239 ಮಕ್ಕಳು ಪರೀಕ್ಷೆ ಬರೆದಿದ್ದರು. ಈ ಪೈಕಿ 2,659 ಗಂಡು ಮಕ್ಕಳು, 4,641 ಹೆಣ್ಣುಮಕ್ಕಳು ಸೇರಿ 7,300 ಮಕ್ಕಳು ತೇರ್ಗಡೆಯಾಗಿದ್ದಾರೆ.
ಸರ್ಕಾರಿ ಆದರ್ಶ ವಿದ್ಯಾಲಯದ ಮಕ್ಕಳು ಈ ಬಾರಿ ಪಾರಮ್ಯ ಸಾಧಿಸಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ 10 ವಿದ್ಯಾರ್ಥಿಗಳ ಪೈಕಿ, ಎಂಟು ಮಂದಿ ವಿವಿಧ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದಾರೆ.
ಜಿಲ್ಲೆಯ ಸಾಧಕರು: 625ರಲ್ಲಿ 619 ಅಂಕಗಳನ್ನು ಗಳಿಸಿರುವ ಗುಂಡ್ಲುಪೇಟೆಯ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ರತ್ನಮ್ಮ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದ್ದಾಳೆ.
ಕೊಳ್ಳೇಗಾಲ ಆದರ್ಶ ವಿದ್ಯಾಲಯದ ಪ್ರಜನ್ ಮತ್ತು ಸಂಜನಾ ಅವರು ತಲಾ 618 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಚಾಮರಾಜನಗರದ ಮಲ್ಲಯ್ಯನಪುರದಲ್ಲಿರುವ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಆರ್ಯ ಎಂ.ಅರುಣ್ 617 ಅಂಕಗಳನ್ನು ಗಳಿಸಿ ಜಿಲ್ಲೆಗೆ ತೃತೀಯ ಸ್ಥಾನಿಯಾಗಿದ್ದಾನೆ.
ಶೇ 100 ಫಲಿತಾಂಶ: ಜಿಲ್ಲೆಯ ಆರು ಸರ್ಕಾರಿ ಮತ್ತು ಎರಡು ಖಾಸಗಿ ಶಾಲೆಗಳು ಸೇರಿದಂತೆ ಎಂಟು ಶಾಲೆಗಳು ಮಾತ್ರ ಶೇ 100ರಷ್ಟು ಫಲಿತಾಂಶ ದಾಖಲಿಸಿವೆ. ಕಳೆದ ವರ್ಷ 49 ಪ್ರೌಢ ಶಾಲೆಗಳಲ್ಲಿ ಎಲ್ಲ ಮಕ್ಕಳೂ ತೇರ್ಗಡೆಯಾಗಿದ್ದರು.
ಚಾಮರಾಜನಗರ ಮತ್ತು ಕೊಳ್ಳೇಗಾಲದ ಆದರ್ಶ ವಿದ್ಯಾಲಯಗಳು, ಗುಂಡ್ಲುಪೇಟೆ ಮತ್ತು ಚಾಮರಾಜನಗರ ತಾಲ್ಲೂಕಿನ ಹರವೆಯ ಮೊರಾರ್ಜಿ ವಸತಿ ಶಾಲೆಗಳು, ಚಾಮರಾಜನಗರ ತಾಲ್ಲೂಕಿನ ಜ್ಯೋತಿಗೌಡನಪುರದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಹರದನಹಳ್ಳಿಯ ಅಂಬೇಡ್ಕರ್ ವಸತಿ ಶಾಲೆ, ಚಾಮರಾಜನಗರದ ಸೇವಾ ಭಾರತಿ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ಮತ್ತು ಕೊಳ್ಳೇಗಾಲದ ಕಾಮಗೆರೆಯ ಸೇಂಟ್ ಕ್ಸೇವಿಯರ್ ಪ್ರೌಢ ಶಾಲೆ ಶೇ 100ಫಲಿತಾಂಶ ದಾಖಲಿಸಿವೆ.
ಬಾಲಕಿಯರ ಮೇಲುಗೈ: ಈ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ 82.14 ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದರೆ, ತೇರ್ಗಡೆಯಾದ ಬಾಲಕರು ಶೇ 65.47.
ಗ್ರಾಮೀಣ ಭಾಗದಲ್ಲಿ 7,263 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 5,188 ಮಂದಿ ಉತ್ತೀರ್ಣರಾಗುವ ಮೂಲಕ ಶೇ 71.43ರಷ್ಟು ಫಲಿತಾಂಶ ದಾಖಲಾಗಿದೆ. ನಗರ ಪ್ರದೇಶದಲ್ಲಿ ಪರೀಕ್ಷೆ ತೆಗೆದುಕೊಂಡ 3,976 ಮಕ್ಕಳಲ್ಲಿ 3,112 ಮಂದಿ ತೇರ್ಗಡೆಯಾಗುವ ಮೂಲಕ ಶೇ 78.27 ಫಲಿತಾಂಶ ಬಂದಿದೆ.
ಗುಂಡ್ಲುಪೇಟೆಗೆ ಮೊದಲ ಸ್ಥಾನ: ತಾಲ್ಲೂಕುವಾರು ಫಲಿತಾಂಶದಲ್ಲಿ ಗುಂಡ್ಲುಪೇಟೆ ಮೊದಲ ಸ್ಥಾನ ಪಡೆದಿದೆ. ಪರೀಕ್ಷೆ ಬರೆದಿರುವ 2,445 ವಿದ್ಯಾರ್ಥಿಗಳ ಪೈಕಿ 1,923 ಮಂದಿ ಉತ್ತೀರ್ಣರಾಗುವ ಮೂಲಕ ಶೇ 78.65 ಫಲಿತಾಂಶ ದಾಖಲಿಸಿದೆ.
ಶೇ 73.50ರಷ್ಟು ಫಲಿತಾಂಶ ದಾಖಲಿಸಿರುವ ಕೊಳ್ಳೇಗಾಲ ತಾಲ್ಲೂಕು ಎರಡನೇ ಸ್ಥಾನ ಗಳಿಸಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ ಶೇ 73.13ರಷ್ಟು, ಯಳಂದೂರಿನ ಶೇ 72.40ರಷ್ಟು ಫಲಿತಾಂಶ ಬಂದಿದ್ದು, ಫಲಿತಾಂಶದಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಹನೂರು ಈ ಬಾರಿ ಕೊನೆಯ ಸ್ಥಾನಕ್ಕೆ ಕುಸಿದಿದೆ. 2,267 ಮಕ್ಕಳ ಪೈಕಿ 1,603 ಮಂದಿ ಉತ್ತೀರ್ಣರಾಗುವ ಮೂಲಕ ಶೇ 70.71ರಷ್ಟು ಫಲಿತಾಂಶ ದಾಖಲಾಗಿದೆ.
ಖಾಸಗಿ ಶಾಲೆಗಳು ಅತಿ ಹೆಚ್ಚು ಶೇ 87.22 ಫಲಿತಾಂಶ ದಾಖಲಿಸಿದ್ದರೆ, ಸರ್ಕಾರಿ ಶಾಲೆಗಳು ಶೇ 71.11 ಮತ್ತು ಅನುದಾನಿತ ಶಾಲೆಗಳು ಶೇ 67.81ರಷ್ಟು ಫಲಿತಾಂಶ ದಾಖಲಿಸಿವೆ.
ಉತ್ತಮ ಫಲಿತಾಂಶಕ್ಕೆ ಎಲ್ಲ ಪ್ರಯತ್ನಗಳನ್ನೂ ನಡೆಸಲಾಗಿತ್ತು. ಹಾಗಿದ್ದರೂ ಕಡಿಮೆ ಫಲಿತಾಂಶ ದಾಖಲಾಗಿದೆಮಲ್ಲಿಕಾರ್ಜುನ ಶಿಕ್ಷಣಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.