ಚಾಮರಾಜನಗರ: ಹನೂರು ತಾಲ್ಲೂಕಿನ ಸುಳ್ವಾಡಿ ಮಾರಮ್ಮ ದೇವಾಲಯದಲ್ಲಿ ನಡೆದ ವಿಷ ಪ್ರಸಾದ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಜುಲೈ 10ಕ್ಕೆ ಮುಂದೂಡಿದೆ.
ಮಹಾದೇವಸ್ವಾಮಿ ಪರ ವಕೀಲರಾದ ಪೊನ್ನಂಪೇಟೆಯ ಅಪ್ಪಣ್ಣ ಅವರ ಪರವಾಗಿ ಕಿರಿಯ ವಕೀಲರು ಹಾಜರಾಗಿದ್ದರು.
ವಕೀಲರ ನೇಮಕ: ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ಬಸವರಾಜ ಅವರು, ‘ವಕೀಲರನ್ನು ನೇಮಕ ಮಾಡಿದ್ದೀರಾ’ ಎಂದು ಉಳಿದ ಮೂವರು ಆರೋಪಿಗಳನ್ನು ಕೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ಬೆಂಗಳೂರಿನ ಸದಾನಂದ ಎಂಬುವವರನ್ನು ನೇಮಕ ಮಾಡಿದ್ದೇವೆ’ ಎಂದು ಉತ್ತರಿಸಿದರು. ಆದರೆ, ವಕೀಲರು ವಿಚಾರಣೆಗೆ ಬಂದಿರಲಿಲ್ಲ.
ಮಹಾದೇವಸ್ವಾಮಿ ಪರ ವಕೀಲರು ಮಾತನಾಡಿ, ‘ಹಿರಿಯ ವಕೀಲರ ಪರವಾಗಿ ಬಂದಿದ್ದೇನೆ. ಸ್ವಾಮೀಜಿ ವಿರುದ್ಧ ಸಲ್ಲಿಸಲಾಗಿರುವ ಆರೋಪ ಪಟ್ಟಿ ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು. ಇದಕ್ಕೆ ನ್ಯಾಯಾಧೀಶರು ಸಮ್ಮತಿಸಿದರು.
ಮಹಾದೇವಸ್ವಾಮಿ ಪರ ಹಿರಿಯ ವಕೀಲರು ಹಾಗೂ ಉಳಿದ ಆರೋಪಿಗಳ ವಕೀಲರು ಬಾರದೆ ಇದ್ದುದರಿಂದ ನ್ಯಾಯಾಧೀಶರು ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿದರು.