ಯಳಂದೂರು: ತಾಲ್ಲೂಕಿನ ಸುತ್ತಮುತ್ತ ಭಾನುವಾರ ‘ತೌತೆ’ ಚಂಡಮಾರುತದ ಪ್ರಭಾವದಿಂದ ತುಂತುರು ಮಳೆಯ ಜೊತೆಗೆ ಚಳಿಗಾಳಿ ಬೀಸಿತು.
ಬಿಳಿಗಿರಿರಂಗನಬೆಟ್ಟದಲ್ಲಿ ಶನಿವಾರ ರಾತ್ರಿ ಮಂಜು ಆವರಿಸಿತ್ತು. ಮೈಕೊರೆಯುವ ಚಳಿಯ ಅನುಭವವೂ ಆಯಿತು.
ಮೂಂಜಾನೆ ಬೀಸಿದ ಗಾಳಿಯ ರಭಸಕ್ಕೆ ಕೆಲ ತೋಟಗಳಲ್ಲಿ ಮಾವಿನ ಕಾಯಿಗಳು ಉದುರಿದವು. ಆದರೆ, ನಿಧಾನಕ್ಕೆ ಬಿಸಿಲು ಕಾಣಿಸಿಕೊಂಡು ಆತಂಕ ದೂರ ಮಾಡಿತು ಎಂದು ಅಂಬಳೆ ಕೃಷಿಕ ಪ್ರದೀಪ್ ಹೇಳಿದರು.
ಕೃಷಿಕರು ಬಿತ್ತನೆ ತಾಕುಗಳನ್ನು ಸಿದ್ಧತೆ ಮಾಡುತ್ತಿದ್ದಾರೆ. ದ್ವಿದಳ ಧಾನ್ಯ, ಬಾಳೆ, ಕಬ್ಬು ನಾಟಿಗೆ ಹೆಚ್ಚಿನ ಒಲವು ತೋರಿದ್ದು, ಲಾಕ್ಡೌನ್ ಅವಧಿಯಲ್ಲಿ ಬಿತ್ತನೆ ಬೀಜ ಕೊಳ್ಳುವವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ. ವೆಂಕಟರಂಗ ಶೆಟ್ಟಿ ತಿಳಿಸಿದರು.