ಚಾಮರಾಜನಗರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಗಣನೀಯ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಗುರುವಾರ 176 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 31 ಮಕ್ಕಳಿದ್ದಾರೆ.
ಹನೂರು ತಾಲ್ಲೂಕಿನ್ಲಲೇ 28 ಮಕ್ಕಳಿಗೆ ಕೊರೊನಾ ವೈರಸ್ ತಗುಲಿರುವುದು ಖಚಿತವಾಗಿದೆ. ಎಲ್ಲ ಮಕ್ಕಳು ಒಡೆಯರಪಾಳ್ಯದ ಟಿಬೆಟಿಯನ್ ನಿರಾಶ್ರಿತ ಶಿಬಿರಕ್ಕೆ ಸೇರಿದವರು ಎಂದು ತಾಲ್ಲೂಕು ಆಡಳಿತ ತಿಳಿಸಿದೆ. ಗುರುವಾರ ನಾಲ್ವರು ಗುಣಮುಖರಾಗಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 451ಕ್ಕೆ ಏರಿದೆ. ಗುರುವಾರದಿಂದ ಸೋಂಕಿತರನ್ನು ಹೋಂ ಐಸೊಲೇಷನ್ಗೆ ಕಳುಹಿಸಲಾಗುತ್ತಿದೆ. ಸೋಂಕು ದೃಢಪಟ್ಟ 176 ಮಂದಿಯ ಪೈಕಿ 149 ಮಂದಿಯನ್ನು ಮನೆಯಲ್ಲೇ ಪ್ರತ್ಯೇಕ ವಾಸಕ್ಕೆ ಕಳುಹಿಸಲಾಗಿದೆ. ಒಟ್ಟು 154 ಮಂದಿ ಮನೆಯಲ್ಲೇ ಇದ್ದು ಆರೈಕೆ ಪಡುತ್ತಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ ದೃಢಪಟ್ಟ ಪ್ರಕರಣಗಳ ಸಂಖ್ಯೆ 33 ಸಾವಿರ ದಾಟಿದೆ (33,139).ಗುರುವಾರ ನಾಲ್ವರು ಗುಣಮುಖರಾಗಿದ್ದು, ಈವರೆ್ಗೆ 32,147 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
5000 ಪರೀಕ್ಷೆ ಗುರಿ: ಈ ಮಧ್ಯೆ, ಜಿಲ್ಲೆಯಲ್ಲಿ ಪ್ರತಿ ದಿನ 5000 ಕೋವಿಡ್ ಪರೀಕ್ಷೆಗಳನ್ನು ನಡೆಸುವ ಗುರಿಯನ್ನು ರಾಜ್ಯ ಸರ್ಕಾರ ನೀಡಿದೆ. ಇದುವರೆಗೂ 2000 ಇತ್ತು. ಆದರೆ, ಅಷ್ಟು ಪರೀಕ್ಷೆಗಳನ್ನೂ ನಡೆಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ.
ಗುರುವಾರ 1,324 ಆರ್ಟಿಪಿಸಿಆರ್, 498 ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ (ರ್ಯಾಟ್) ಸೇರಿದಂತೆ 1,822 ಕೋವಿಡ್ ಪರೀಕ್ಷೆಗಳ ವರದಿ ಬಂದಿದೆ. ಈ ಪೈಕಿ ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ 111 ಹಾಗೂ ರ್ಯಾಟ್ನಲ್ಲಿ 65 ಸೇರಿ 176 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.
ಹನೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 59 ಮಂದಿ, ಚಾಮರಾಜನಗರದಲ್ಲಿ 46, ಕೊಳ್ಳೇಗಾಲದಲ್ಲಿ 32, ಗುಂಡ್ಲುಪೇಟೆಯಲ್ಲಿ 29 ಹಾಗೂ ಯಳಂದೂರು ತಾಲ್ಲೂಕಿನಲ್ಲಿ 10 ಮಂದಿಗೆ ಕೋವಿಡ್ ಇರುವುದು ದೃಢಪಟ್ಟಿದೆ.
ಈ ಪೈಕಿ, ಯಂದೂರಿನಲ್ಲಿ ಒಬ್ಬ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಇಬ್ಬರು, ಹನೂರಿನಲ್ಲಿ 28 ಮಕ್ಕಳು ಕೋವಿಡ್ನಿಂದ ಬಳಲುತ್ತಿದ್ದಾರೆ.
’ಹನೂರು ಟಿಬೆಟಿಯನ್ನರ ಶಿಬಿರದಲ್ಲಿ 28 ಮಕ್ಕಳಿಗೆ ಸೋಂಕು ದೃಢಪಟ್ಟಿದೆ. ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಲಾಗುವುದು‘ ಎಂದು ಪ್ರಭಾರ ಡಿಡಿಪಿಐ ಲಕ್ಷ್ಮಿಪತಿ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.