ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರ ಕೋವಿಡ್ ಸೋಂಕು ದೃಢಪಟ್ಟ ಮೂವರು ಮೃತಪಟ್ಟಿದ್ದಾರೆ. ಇಬ್ಬರು ಕೋವಿಡ್ ಕಾರಣದಿಂದ ಕೊನೆಯುಸಿರೆಳೆದಿದ್ದರೆ, ಒಬ್ಬರು ಬೇರೆ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಇದರೊಂದಿಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 57ಕ್ಕೆ ಏರಿದೆ. ಕೋವಿಡ್ಯೇತರ ಕಾರಣದಿಂದ ಮೃತಪಟ್ಟವರ ಸಂಖ್ಯೆ 25 ತಲುಪಿದೆ.
ರಕ್ತ ಹೀನತೆಯಿಂದ ಬಳಲುತ್ತಿದ್ದ ಚಾಮರಾಜನಗರದ ನಿವಾಸಿ 47ರ ವಯಸ್ಸಿನ ಮಹಿಳೆ ಸೆ.17ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ನಂತರ ಪರೀಕ್ಷೆ ನಡೆಸಿದಾಗ ಕೋವಿಡ್ ಇರುವುದು ದೃಢಪಟ್ಟಿತ್ತು. ಚಿಕಿತ್ಸೆಗೆ ಸ್ಪಂದಿಸದೆಬುಧವಾರ ಮೃತಪಟ್ಟಿದ್ದಾರೆ.
ನಗರದ 85 ವರ್ಷದ ವೃದ್ಧರೊಬ್ಬರು ಸೆ.21ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ನಿಧನರಾಗಿದ್ದಾರೆ.
ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಚಾಮರಾಜನಗರ ತಾಲ್ಲೂಕಿನ ನಲ್ಲೂರು ನಿವಾಸಿ 60 ವರ್ಷ ವಯಸ್ಸಿನ ಪುರುಷ ಮಂಗಳವಾರ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಮೃತಪಟ್ಟಿದ್ದಾರೆ. ಇವರ ಸಾವನ್ನು ಕೋವಿಡ್ಯೇತರ ಸಾವಿನ ಪ್ರಕರಣದ ಪಟ್ಟಿಗೆ ಸೇರಿಸಲಾಗಿದೆ.
ಜಿಲ್ಲೆಯಲ್ಲಿ ಹೊಸದಾಗಿ 51 ಪ್ರಕರಣಗಳು ವರದಿಯಾಗಿವೆ. 44 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ 3,634 ಪ್ರಕರಣಗಳು ದೃಢಪಟ್ಟಿವೆ. 2,953 ಮಂದಿ ಗುಣಮುಖರಾಗಿದ್ದಾರೆ. 600 ಸಕ್ರಿಯ ಪ್ರಕರಣಗಳಿವೆ. 299 ಮಂದಿ ಹೋಂ ಐಸೊಲೇಷನ್ನಲ್ಲಿದ್ದಾರೆ. 24 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬುಧವಾರ 507 ಮಂದಿಯ ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ ಆರ್ಟಿಪಿಸಿಆರ್ನಲ್ಲಿ 308, ರ್ಯಾಪಿಡ್ ಆ್ಯಂಟಿಜೆನ್ನಲ್ಲಿ 97 ಮತ್ತು ಟ್ರುನಾಟ್ನಲ್ಲಿ 55 ಪರೀಕ್ಷೆಗಳನ್ನು ನಡೆಸಲಾಗಿದೆ. 460 ಮಂದಿಯ ವರದಿ ನೆಗೆಟಿವ್ ಬಂದಿವೆ. 47 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ನಾಲ್ಕು ಪ್ರಕರಣಗಳು ಮೈಸೂರಿನಲ್ಲಿ ದೃಢಪಟ್ಟಿವೆ.